ಸುಳ್ಯ: ನಿತ್ಯದ ಅಪಘಾತ ಭೀತಿ: ರಸ್ತೆ ಮಧ್ಯೆ ಅಂಬರದಂತೆ ಬಿದ್ದಿರುವ ಗುಂಡಿಗಳು;ಪ್ರಾಣಾಪಾಯದಲ್ಲಿ ಸಾರ್ವಜನಿಕರು!

  • 25 May 2025 02:53:59 PM


ಸುಳ್ಯ: ನಗರದ ವಿವಿಧೆಡೆಗಳಲ್ಲಿ ರಸ್ತೆಗಳ ಮಧ್ಯೆ ಅಂಬರದಂತೆ ಬಿದ್ದಿರುವ ಗುಂಡಿಗಳಿಂದ ಇದೀಗ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.

 

ಇದರಿಂದ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಭಯಭೀತರಾಗಿದ್ದಾರೆ. ಈ ಸಮಸ್ಯೆಯನ್ನು ಕಾಲಕಾಲಕ್ಕೆ ತುರ್ತು ಕ್ರಮವಾಗಿ ಬಗೆಹರಿಸಲು ಮತ್ತು ದುರಸ್ತಿಗೆ ಮುಂದಾಗಬೇಕಾದ ಅಧಿಕಾರಿಗಳು ಕಿವಿಗೊಡುವ ಸ್ಥಿತಿಯಲ್ಲಿಲ್ಲ. .

 

ಜನರ ಕಷ್ಟಗಳು ಅವರಿಗೆ ಗೊತ್ತಿಲ್ಲವೋ ಎಂಬಷ್ಟು ಮಟ್ಟಿಗೆ ಅವರು ದಿವ್ಯಮೌನ ಧರಿಸಿವಂತೆ ಕಂಡುಬರುತ್ತಿದೆ.

 

ಜನಪ್ರತಿನಿಧಿಗಳು ಈ ಸಮಸ್ಯೆಗಳನ್ನು ಸರಿಪಡಿಸುವ ಬದಲು ಹೊಣೆಗಾರಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಜನರನ್ನೇ ಜವಾಬ್ದಾರರನ್ನಾಗಿ ಮಾಡಿ, ತಮ್ಮ ಕರ್ತವ್ಯದಿಂದ ಹೊರಬರುವ ಪ್ರಯತ್ನ ನಡೆಯುತ್ತಿದೆ. 

 

ಅಮೃತ್ ಯೋಜನೆಯಡಿ ಪೈಪ್ ಅಳವಡಿಕೆಗೆ ಕಟ್ಟಿದ ಕಾಂಕ್ರೀಟ್ ರಸ್ತೆಗಳನ್ನು ಹೀಗೆ ತೂರಿ ತೆಗೆದು ಕೆಲಸ ಮಾಡುತ್ತಿದ್ದಾರೆ. ಆದರೆ, ನಂತರ ಈ ರಸ್ತೆಗಳ ದುರಸ್ತಿ ಕಾರ್ಯಕ್ಕೂ ಜನರೇ ಹೋರಾಟ ನಡೆಸಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ.

 

 

 ಇಲಾಖೆಗಳ ನಡುವಿನ ಸಮನ್ವಯದ ಕೊರತೆಯು ಇದಕ್ಕೆ ಇನ್ನಷ್ಟು ತೊಂದರೆಯನ್ನು ಉಂಟುಮಾಡುತ್ತಿದೆ. 

 

ಪೈಪ್ ಹಾಕುವವರು ತಮ್ಮ ಕೆಲಸ ಮುಗಿಸುತ್ತಿದ್ದಂತೆಯೇ ಟೆಲಿಫೋನ್ ಕೇಬಲ್ ಇಲಾಖೆಯವರು ಮತ್ತೆ ಅಗೆಯುವ ಸ್ಥಿತಿ ಕಾಣಸಿಗುತ್ತಿದೆ. ಪೂರ್ವ ಸಮಾಲೋಚನೆಯಿಲ್ಲದೆ ನಡೆಯುವ ಈ ಕಾರ್ಯದಿಂದ ನೆಲದಡಿಯಲ್ಲಿ ಅಳವಡಿಸಿದ ಫೋನ್ ಕೇಬಲ್‌ಗಳು ತುಂಡಾಗಿ ಸಂಪರ್ಕ ಕಡಿತವಾಗುತ್ತಿದೆ.

 

  ಕಳೆದ ವಾರ ಸುಳ್ಯ ನಗರದಲ್ಲಿ ನಡೆದ ಒಂದು ಕೆಲಸದಿಂದ ತಾಲೂಕು ಕಚೇರಿಯಲ್ಲಿನ ಎಲ್ಲ ಆನ್‌ಲೈನ್ ಸೇವೆಗಳು ಸ್ಥಗಿತಗೊಂಡಿರುವುದು ಇದಕ್ಕೆ ದೊಡ್ಡ ಉದಾಹರಣೆಯಾಗಿದೆ.