ಭಯೋತ್ಪಾದನೆ ವಿರುದ್ಧ ಭಾರತದ ದೃಢ ನಿಲುವಿಗೆ ಗ್ರೀಸ್ ಸಂಪೂರ್ಣ ಬೆಂಬಲ! ಸರ್ವಪಕ್ಷಗಳ ನಿಯೋಗದ ಭಾಗವಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಸ್ಪಷ್ಟಪಡಿಸಿದ ರಾಜಿರಹಿತ ನಿಲುವು

  • 29 May 2025 05:28:16 PM


ಗ್ರೀಸ್: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತದ ಅಚಲ ನಿಲುವನ್ನು ಪ್ರಸ್ತುತಪಡಿಸಲು, ಸಂಸದೆ ಕನಿಮೋಳಿ ನೇತೃತ್ವದ ಸರ್ವಪಕ್ಷಗಳ ನಿಯೋಗವು ಸ್ಲೊವೇನಿಯಾದಿಂದ ಗ್ರೀಸ್‌ಗೆ ಆಗಮಿಸಿದೆ. ಈ ನಿಯೋಗದಲ್ಲಿ ದಕ್ಷಿಣ ಕನ್ನಡದ ಸಂಸದ ಕ್ಯಾ. ಬ್ರಿಜೇಶ್ ಚೌಟ ಕೂಡ ಭಾಗಿಯಾಗಿದ್ದಾರೆ. ಭಾರತವು ಭಯೋತ್ಪಾದನೆಯ ಕುರಿತು ಅನುಸರಿಸುತ್ತಿರುವ ಶೂನ್ಯ ಸಹಿಷ್ಣುತೆ ಹಾಗೂ ರಾಜಿರಹಿತ ನೀತಿಯನ್ನು ಅವರು ಗ್ರೀಕ್ ನಾಯಕರ ಎದುರು ಸ್ಪಷ್ಟಪಡಿಸಿದ್ದಾರೆ.

 

ರಷ್ಯಾ ಮತ್ತು ಸ್ಲೊವೇನಿಯಾ ಭೇಟಿಯ ನಂತರ ಗ್ರೀಸ್‌ಗೆ ಆಗಮಿಸಿದ ನಿಯೋಗವನ್ನು ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ಅವರು ಬರಮಾಡಿಕೊಂಡರು. ನಿಯೋಗವು ಹೆಲೆನಿಕ್ ರಿಪಬ್ಲಿಕ್‌ನ ಹಿರಿಯ ಅಧಿಕಾರಿಗಳು ಹಾಗೂ ಡೆಪ್ಯೂಟಿ ಮಿನಿಸ್ಟರ್ ಟಾಟೋಸ್ ಚಾಟ್ಜಿವಾಸಿಲಿಯೊ ಅವರೊಂದಿಗೆ ಸಭೆ ನಡೆಸಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಮಗ್ರ ಮಾಹಿತಿ ನೀಡಿದೆ.

 

ಭಾರತದ ನಿಲುವನ್ನು ಸಮರ್ಥನೆಗೊಳಿಸುತ್ತಾ ಆಪರೇಷನ್ ಸಿಂಧೂರಿನ ಕುರಿತು ವಿವರ ನೀಡಿದ್ದು, ಇದು ಪೂರ್ವಯೋಜಿತ, ಸಮರ್ಥ ಮತ್ತು ನ್ಯಾಯಬದ್ಧ ಪ್ರತಿಕ್ರಿಯೆ ಎಂಬುದಾಗಿಯೂ ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಎನ್ನು ವಿವರವಾಗಿ ತಿಳಿಸಿದೆ.l

 

ನಂತರ, ನಿಯೋಗವು ಹೆಲೆನಿಕ್ ಫೌಂಡೇಶನ್ ಫಾರ್ ಯುರೋಪಿಯನ್ ಅಂಡ್ ಫಾರಿನ್ ಪಾಲಿಸಿ (ELIAMEP)ನ ಮಾರಿಯಾ ಗವೌನೆಲಿ, ನೀತಿ ತಜ್ಞರು, ಸಂಸತ್ ಸದಸ್ಯರು, ಮಾಧ್ಯಮ ಮತ್ತು ಚಿಂತಕರೊಂದಿಗೆ ಚರ್ಚೆ ನಡೆಸಿ, ಭಯೋತ್ಪಾದನೆಯ ವಿರುದ್ಧ ಭಾರತದ ಬದ್ಧತೆಯನ್ನು ತೀವ್ರವಾಗಿ ಮನವರಿಕೆ ಮಾಡಿತು.

 

ಭಾರತದ ಶಾಂತಿ, ಏಕತೆ ಮತ್ತು ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಗ್ರೀಸ್ ತನ್ನ ಸಂಪೂರ್ಣ ಬೆಂಬಲವನ್ನು ಸ್ಪಷ್ಟ ಪಡಿಸಿದೆ.

 

ಪಾಕಿಸ್ತಾನದ ಉಗ್ರಪೋಷಣೆಯ ವಿರುದ್ಧ ಜಾಗತಿಕ ಅಭಿಪ್ರಾಯವನ್ನು ರೂಪಿಸುವ ಕೇಂದ್ರ ಸರ್ಕಾರದ ಯತ್ನದ ಭಾಗವಾಗಿ, ಈ ನಿಯೋಗವು ಮುಂದಾಗಿ ಲಾಟ್ವಿಯಾ ಮತ್ತು ಸ್ಪೇನ್ ಪ್ರವಾಸ ಕೈಗೊಳ್ಳಲಿದೆ.