ನಿಮ್ಮ ಕ್ಷಣಗಣನೆ ಆರಂಭವಾಗಿದೆ ಮುಜಾಹಿದ್ದೀನ್ ಹೆಸರಿನಲ್ಲಿ ವಾಟ್ಸಾಪ್ ವಾಯ್ಸ್ ನೋಟ್ ಮೂಲಕ ಹಿಂದೂ ಜಾಗರಣ ವೇದಿಕೆ ಪ್ರಮುಖರಿಗೆ ವಿದೇಶದಿಂದ ಜೀವ ಬೆದರಿಕೆ!

  • 29 May 2025 11:34:07 PM


ಬಂಟ್ವಾಳ: ಬಂಟ್ವಾಳ ತಾಲೂಕಿನ ಬಡೋಳಿ ಗ್ರಾಮದ ರಕ್ಷಿತ್ ಕೆ ಬುಡೋಳಿಯವರಿಗೆ ಮತ್ತು ಮಂಗಳೂರು ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ಸಂಯೋಜಕರಾದ ನರಸಿಂಹ ಮಾಣಿ ಅವರಿಗೆ ವಿದೇಶಗಳಿಂದ ಉಗ್ರ ಸಂಘಟನೆ ಮುಜಾಹಿದ್ದೀನ್ ಎಂಬ ಹೆಸರಿನಲ್ಲಿ ಜೀವ ಬೆದರಿಕೆಯ ಸಂದೇಶಗಳು ವಾಟ್ಸಪ್ ಮೂಲಕ ಬಂದಿರುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

 

ರಕ್ಷಿತ್ ಬುಡೋಳಿ ಅವರು ನೀಡಿದ ದೂರಿನ ಪ್ರಕಾರ, ಮೇ 28ರಂದು ಮಧ್ಯಾಹ್ನ 12:36ಕ್ಕೆ, ಸಂಜೆ 5:10ಕ್ಕೆ ಮತ್ತು 5:26ಕ್ಕೆ ಯುಎಇ ಹಾಗೂ ಪಾಕಿಸ್ತಾನದ ವಾಟ್ಸಪ್ ಅಪರಿಚಿತ ನಂಬರ್ ಗಳಿಂದ ವ್ಯಕ್ತಿಗಳು ಉರ್ದೂ ಭಾಷೆಯಲ್ಲಿ ಆಡಿಯೋ ಸಂದೇಶ ಕಳಿಸಿದ್ದರು.

 

 ಆ ವಾಯ್ಸ್ ಮೆಸ್ಸಾಗೆಗಳಲ್ಲಿ ರಕ್ಷಿತ್ ಮತ್ತು ನರಸಿಂಹ ಮಾಣಿಯವರು “ಮುಜಾಹಿದ್ದೀನ್‌ಗಳ ಗುರಿಯಾಗಿದ್ದಾರೆ” ಎಂದು ಮತ್ತು "ನಾವು ನಿಮ್ಮ ಮನೆ ತಲುಪಿದ್ದೇವೆ, ಈಗ ನರಸಿಂಹನ ಕ್ಷಣಗಣನೆ ಆರಂಭವಾಗಿದೆ" ಎಂಬಂತಹ ಜೀವ ಬೆದರಿಕೆಗಳನ್ನು ಇದ್ದವು ಎನ್ನಲಾಗಿದೆ.

 

ಇತ್ತೀಚೆಗೆ ಭೀಕರವಾಗಿ ಸಾವನ್ನಪ್ಪಿದ ಸುಹಾಶ್ ಶೆಟ್ಟಿಯಂತೆಯೇ ನಿಮ್ಮಿಬ್ಬರನ್ನು ಕೊಲ್ಲುತ್ತೇವೆ” ಎಂಬ ಗಂಭೀರ ಶಬ್ದಗಳ ಮೂಲಕ ಜೀವ ಬೆದರಿಕೆಗಳು ಬಂದಿದ್ದು ಈ ಅಸಭ್ಯ ಭಾಷೆಯ ಧ್ವನಿಸಂದೇಶಗಳನ್ನು ರಕ್ಷಿತ್ ಬುಡೋಳಿ ಪೆನ್ ಡ್ರೈವ್‌ನಲ್ಲಿ ಸಂಗ್ರಹಿಸಿ ಪೊಲೀಸ್ ಠಾಣೆಗೆ ದಾಖಲಿಸಿದ್ದಾರೆ.

 

ಈ ಘಟನೆ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಕ್ಷಿತ್ ಬುಡೋಳಿ ಅವರು ನೀಡಿದ ದೂರು ಆಧಾರವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.