ಕನ್ನಡ ಸಾಹಿತ್ಯ ಲೋಕದಲ್ಲಿ ಹೆಚ್.ಎಸ್.ವಿ ಹೆಸರಿನಿಂದ ಚಿರಪರಿಚಿತರಾದ ಖ್ಯಾತ ಕವಿ, ಸಾಹಿತಿ ಹಾಗೂ ನಾಟಕ ರಚನೆಕಾರರಾದ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ (ವಯಸ್ಸು 80) ಅವರು ಶುಕ್ರವಾರ ವಿಧಿವಶರಾಗಿದ್ದಾರೆ. ಅವರ ಅಗಲಿಕೆಗೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ನೂರೆಂಟು ಮನೆಗಳ ಸಣ್ಣ ಗ್ರಾಮದಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಅವರು 1944ರ ಜೂನ್ 23ರಂದು ಜನಿಸಿದರು.
ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಬಳಿಕ, ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ ಪದವಿಯನ್ನು ಪಡೆದರು.
ನಂತರ, "ಕನ್ನಡದಲ್ಲಿ ಕಥನ ಕವನಗಳು" ಎಂಬ ಮಹಾಪ್ರಬಂಧವನ್ನು ಮಂಡಿಸಿ ಪಿಎಚ್.ಡಿ. ಪದವಿದಾರರಾದರು.
1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. 2000ರಲ್ಲಿ ನಿವೃತ್ತಿಯಾದರೂ ಸಹ, ಸಾಹಿತ್ಯ ಸೇವೆಯನ್ನು ನಿರಂತರವಾಗಿ ಮುಂದುವರೆಸಿದರು.
ಕಾವ್ಯ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಇತ್ಯಾದಿ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹೆಚ್.ಎಸ್.ವಿ ಅವರು 100ಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ
ವಿಶೇಷವಾಗಿ ಮಕ್ಕಳಿಗಾಗಿ ರಚಿಸಿರುವ ಕವಿತೆಗಳು, ನಾಟಕಗಳು ಹಾಗೂ ಕಥೆಗಳು ಸಹ ಪ್ರಸಿದ್ಧಿ ಪಡೆದಿವೆ.
ಅವರು ಅನುವಾದಿಸಿದ ಕಾಳಿದಾಸನ ಋತುಸಂಹಾರ ಕಾವ್ಯಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಲಭಿಸಿತ್ತು. ಇದು ಅವರ ನೈಪುಣ್ಯತೆಗೆ ತಲಪಿದ ರಾಷ್ಟ್ರಮಟ್ಟದ ಗೌರವವಾಗಿತ್ತು.
ಇವರ ಅಗಲಿಕೆಯು ಸಾಹಿತ್ಯ ಲೋಕಕ್ಕೆ ಬಂದ ಅಪಾರನಷ್ಟವಾಗಿರುತ್ತದೆ