ಬೈಂದೂರು ಕ್ಷೇತ್ರದಲ್ಲಿ ಮೂರು ಹೊಸ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಶೀಘ್ರದಲ್ಲೇ ಚಾಲನೆ; ಶಾಸಕ ಗುರುರಾಜ್ ಗಂಟಿಹೊಳೆ

  • 02 Jun 2025 06:02:53 PM


ಬೈಂದೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ ಕ್ಷೇತ್ರವನ್ನು ಬಲ ವರ್ಧನೆ ಮಾಡುವ ಉದ್ದೇಶದಿಂದ 2023-24 ನೇ ಸಾಲಿನಲ್ಲಿ 15 ನೇ ಹಣಕಾಸು ಆಯೋಗದಡಿ ರಾಜ್ಯದ ಆರೋಗ್ಯ ವಲಯದ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ ಕಾರ್ಯಕ್ರಮದಡಿಯಲ್ಲಿ ಬೈಂದೂರಿನ 2 ಕಡೆಯಲ್ಲಿ ಆರೋಗ್ಯ ಕೇಂಗ್ರ ಸ್ಥಾಪನೆಯಾಗಲಿದೆ ಎಂಬುದಾಗಿ ಬೈಂದೂರು ಶಾಸಕರಾದ ಗುರುರಾಜ್‌ ಗಂಟಿಹೊಳೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.

 

ಬೈಂದೂರು ತಾಲ್ಲೂಕಿನ ನಾಡ,ಹೇರೂರು ಗ್ರಾಮ ಹಾಗೂ ಕುಂದಾಪುರ ತಾಲ್ಲೂಕಿನ ಹೊಸಂಗಡಿ ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡಕ್ಕಾಗಿ ಸರಕಾರಿ ಜಾಗ ಮಂಜೂರಾತಿ ಲಾಭಿಸಿರುತ್ತದೆ.

 

ಆದ್ದರಿಂದ ಶೀಘ್ರದಲ್ಲೇ 1.95 ಕೋಟಿ ವೆಚ್ಚದಲ್ಲಿ 3 ಕಡೆ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕರು ಹೇಳಿದ್ದಾರೆ.

 

ಬೈಂದೂರು ತಾಲೂಕು ನಾಡ ಗ್ರಾಮದ ಸರ್ವೇ ನಂಬ್ರ 185 ರಲ್ಲಿ 0.05 ಎಕ್ರೆ ಹಾಗೂ ಹೇರೂರು ಗ್ರಾಮದ ಸರ್ವೇ ನಂಬ್ರ 83 ರಲ್ಲಿ 0.10 ಎಕ್ರೆ ಜಾಗ ಹಾಗೆಯೇ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಸರ್ವೇ ನಂಬ್ರ 49/1 ರಲ್ಲಿ 0.29 ಎಕ್ರೆ ವಿಸ್ತೀರ್ಣ ಜಾಗವನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಉದ್ದೇಶಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಸರಿಗೆ ಮಂಜೂರಾಗಿದ್ದು ಇನ್ನೂ ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.