ಬದಿಯಡ್ಕ: ಪೆರ್ಲ ಸಮೀಪದ ಬೆದ್ರಂಪಳ್ಳ ಗ್ರಾಮದಲ್ಲಿ ಹಿಂದೂ ಗ್ರಹಣಿ ಸಹಿತ ಇಬ್ಬರು ಮಕ್ಕಳನ್ನು ಮತಾಂತರ ಮಾಡಲು ಪ್ರಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಪರಿಶಿಷ್ಟ ಪಂಗಡದ ಹಿಂದು ಮಹಿಳೆಯೊಬ್ಬರನ್ನು ಎರಡು ಮಕ್ಕಳ ಸಹಿತ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ತಂತ್ರವಿದ್ದಿದ್ದ ಮಲೆಯಾಳಿ ವ್ಯಕ್ತಿಯ ಪ್ರಯತ್ನವನ್ನು ಪೊಲೀಸರು ಸುಧಾರಣೆಯ ಹಂತದಲ್ಲಿ ಹತ್ತಿಕ್ಕಿದ್ದಾರೆ.
ತೆಂಕಣ ಕೇರಳದಿಂದ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆಂದು ಬಂದ ಮಲೆಯಾಳಿ ವ್ಯಕ್ತಿಯಾದ ಈತ ಈ ಮಹಿಳೆಯ ಬಡತನವನ್ನು ಬಂಡವಾಳವಾಗಿಸಿಕೊಂಡು ಪ್ರೀತಿಯ ನಾಟಕ, ಆಸ್ತಿ, ಹಣ ಹಾಗೂ ವೈಭೋಗದ ಆಮಿಷವೊಡ್ಡಿ ಮತಾಂತರದ ದಾರಿಯತ್ತ ಎಳೆಯಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.
ಈತನ ಮಾತುಗಳಿಗೆ ಮಂಕಾದ ಮಹಿಳೆ ತನ್ನ ಗಂಡ ಮತ್ತು ಕುಟುಂಬದಿಂದ ದೂರಾಗಿ, ಮಕ್ಕಳೊಂದಿಗೆ ನಾಪತ್ತೆಯಾಗಿದ್ದು, ಈ ಕುರಿತಾಗಿ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದ ಈ ಮಹಿಳೆ, ಮತಾಂತರ ಯತ್ನದ ಆರೋಪಿಯ ಸಂಪರ್ಕದಲ್ಲಿದ್ದ ಬಳಿಕ ಅವಳ ನಡತೆಗಳಲ್ಲಿ ತೀವ್ರ ಬದಲಾವನೆ ಉಂಟಾಗಿದ್ದು ಹಿಂದೂ ಧರ್ಮ, ಕುಟುಂಬ ಮತ್ತು ಸಮುದಾಯದಿಂದ ದೂರ ಉಳಿಯಲು ಆರಂಭಿಸಿದ್ದಳು.
ಮಗನನ್ನು ಸ್ಥಳೀಯ ಖಾಸಗೀ ಶಾಲೆಯಿಂದ ದೂರದ ಕಾನ್ವೆಂಟ್ ಶಾಲೆಗೆ ಸೇರಿಸುವ ನೆಪದಲ್ಲಿ ವರ್ಗಾವಣಾ ಪತ್ರ ಪಡೆದು ತೆರಳಿದ್ದಳು ಈಕೆ ಎಂಬ ಮಾಹಿತಿ ಲಭ್ಯವಾಗಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬದಿಯಡ್ಕ ಪೊಲೀಸರು, ಮಹಿಳೆ ಹಾಗೂ ಮಕ್ಕಳನ್ನು ಶಿವಮೊಗ್ಗದ ಸಮೀಪದಿಂದ ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಿದರು.
ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಮಹಿಳೆಯು ತಮ್ಮ ಮನೆಯವರೊಂದಿಗೆ ಹೋಗುವುದಾಗಿ ಒಪ್ಪಿದ್ದರಿಂದ ಪ್ರಕರಣವು ತಾತ್ಕಾಲಿಕವಾಗಿ ಸುಖಾಂತ್ಯವನ್ನು ಕಂಡಿದೆ.