ಸಾಮಾಜಿಕ ಮಾಧ್ಯಮದಲ್ಲಿ ಕೋಮು ದ್ವೇಷ ಹರಡುವಿಕೆ; ಮಂಗಳೂರಿನಲ್ಲಿ ಐವರು ಆರೋಪಿಗಳ ಬಂಧನ!

  • 05 Jun 2025 01:29:59 PM


ಮಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದ ಪ್ರಚೋದನಕಾರಿ ವಿಷಯಗಳನ್ನು ಹಂಚುತ್ತಿದ್ದ ಐವರನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. 

 

ಈ ಕಾರ್ಯಾಚರಣೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಅವರ ನೇತೃತ್ವದಲ್ಲಿ ನಡೆಯಿತು.

 

ಆರೋಪಿಗಳು ಮತ್ತು ಖಾತೆಗಳ ವಿವರಗಳು: 

 

ಮೊಹಮ್ಮದ್ ಅಸ್ಲಾಂ (23), ಚೇತನ್ (20), ನಿತಿನ್ ಅಡಪ (23), ರಿಯಾಜ್ ಇಬ್ರಾಹಿಂ (30), ಜಮಾಲ್ ಜಕೀರ್ (21) ಮತ್ತು ಗುರು ಪ್ರಸಾದ್ (ವಯಸ್ಸು ತಿಳಿದಿಲ್ಲ) ಎಂಬವರು ವಿಭಿನ್ನ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಕೋಮು ಪ್ರಚೋದನೆ ನೀಡುವ ರೀತಿಯಲ್ಲಿ ಪೋಸ್ಟ್‌ಗಳನ್ನು ಹಂಚಿದ್ದಾಗಿ ಆರೋಪಿಸಲಾಗಿದೆ. 

 

ಈ ಖಾತೆಗಳ ಹೆಸರುಗಳು ಕ್ರಮವಾಗಿ team_jokerzzz._, team_karna_surathkal, bary_royal_nawab, troll_bengare_ro_makka ಮತ್ತು ಗುರು ಪ್ರಸಾದ್ ಹಳೆಯಂಗಡಿ ಆಗಿವೆ.

 

 ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ನ ಸೆಕ್ಷನ್ 192, 196(1), 196(1)(ಎ), 353(1)(c), 353(2), 79 ಮತ್ತು 56 ಅಡಿಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ. ಕೆಲವರು ವಿದೇಶದಿಂದ ಈ ಖಾತೆಗಳನ್ನು ನಿರ್ವಹಿಸುತ್ತಿದ್ದರೆ, ಇತರರು ನಕಲಿ ಹೆಸರಿನಲ್ಲಿ ಸಿಮ್ ಕಾರ್ಡ್ ಬಳಸಿ ಈ ಕೆಲಸಗಳನ್ನು ಮಾಡುತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ (LOC) ಕೂಡ ಹೊರಡಿಸಲಾಗಿದೆ.

 

 ಈ ಕಾರ್ಯಾಚರಣೆ ಮಂಗಳೂರು ನಗರ ಪೊಲೀಸ್ ಇಲಾಖೆ ರಚಿಸಿದ ವಿಶೇಷ ತನಿಖಾ ತಂಡಗಳ ಮೂಲಕ ನಡೆಯುತ್ತಿದ್ದು, ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್ ಮತ್ತು ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿದೆ. ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಂಡು ಕೋಮು ಸೌಹಾರ್ದತೆಗೆ ಕಿರಿಕಿರಿ ತರಲು ಯಾವುದೇ ಪ್ರಯತ್ನವನ್ನೂ ಸಹಿಸಲ್ಲ ಎಂಬ ಕಟ್ಟುನಿಟ್ಟಾದ ಸಂದೇಶವನ್ನು ಪೊಲೀಸರು ಈ ಮೂಲಕ ಸಾರಿದ್ದಾರೆ.