ಕಾಸರಗೋಡು: ವಿದ್ಯಾನಗರ ಠಾಣಾ ವ್ಯಾಪ್ತಿಯ ಎಡನೀರು ಕಳೇರಿ ಎಂಬಲ್ಲಿ ಧಾರ್ಮಿಕ ಸಂಕೇತವಾಗಿ ಸ್ಥಾಪಿಸಲಾದ ಓಂಕಾರ ಧ್ವಜ ಹಾಗೂ ತೋರಣಗಳನ್ನು ಯಾವುದೇ ಸೂಚನೆಯಿಲ್ಲದೆ ಪೊಲೀಸರು ತೆರವುಗೊಳಿಸಿದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕ್ರಮವನ್ನು ಪಕ್ಷಪಾತಪೂರ್ಣ ಕ್ರಮವೆಂದು ವಿಹಿಂಪ ಖಂಡಿಸಿದೆ.
ಸುಮಾರು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಿಪಿಎಂ ಧ್ವಜಗಳು ಅಡ್ಡಿ ಉಂಟುಮಾಡಿದರೂ ಪೊಲೀಸರು ಕ್ರಮವಹಿಸದಿರುವುದು ದುರದೃಷ್ಟಕರವಾದ ಸಂಗತಿ ಎಂದು ವಿಹಿಂಪ ಟೀಕಿಸಿದೆ. ಪೊಲೀಸರು ಪಾಲಿಸುತ್ತಿರುವ ಈ ನೀತಿ ವಿಷಾದನೀಯವಾದುದು ಎಂದು ತಿಳಿಸಿದೆ.
ಹಿಂದೂ ಧಾರ್ಮಿಕ ಆಚರಣೆಗಳಿಗೆ ತಡೆಯೊಡ್ಡಲು ಸಿಪಿಎಂ ನಿಲುವಿಗೆ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪವನ್ನೂ ವಿಹಿಂಪ ಮುನ್ನೆಡಿಸಿದೆ.
ಹಿರಿಯ ನಾಗರಿಕರ ಮನೆಗಳಿಗೆ ನುಗ್ಗಿ ಅವರ ವಿದೇಶದಲ್ಲಿರುವ ಮಕ್ಕಳಿಗೆ ಕರೆಮಾಡಿ ತನಿಖೆ ನಡೆಸುವ ವಿದ್ಯಾನಗರ ಪೊಲೀಸರ ಈ ಕ್ರಮ ಭೀತಿಯ ವಾತಾವರಣವನ್ನು ಉಂಟುಮಾಡುತ್ತಿದೆ.
ಈ ಪಕ್ಷಪಾತ ಧೋರಣೆ ಮುಂದುವರೆದರೆ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿಹಿಂಪ ಎಚ್ಚರಿಸಿದೆ.