ಸಿದ್ದಾಪುರದಲ್ಲಿ ಭೀತಿ ಹರಡಿಸಿದ್ದ ಕಾಡಾನೆ ಸೆರೆ; 150 ಸಿಬ್ಬಂದಿಯ ಕಾರ್ಯಾಚರಣೆ ಯಶಸ್ವಿ! ಮೂರು ದಿನಗಳ ಆತಂಕದ ಕೊನೆ!

  • 06 Jun 2025 03:21:15 PM


ಸಿದ್ದಾಪುರ: ಸಿದ್ದಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂರು ದಿನಗಳಿಂದ ನಿದ್ದೆ ಕದಡುತ್ತಿದ್ದ ಕಾಡಾನೆಯನ್ನು ಕೊನೆಗೂ ಸೆರೆಹಿಡಿಯಲಾಯಿತು.

 

  ಜನರಿಗೆ ಭೀತಿ ಹುಟ್ಟಿಸಿದ್ದ ಈ ಆನೆಯನ್ನು ಸೆರೆಹಿಡಿಯುವುದಕ್ಕಾಗಿ 150ಕ್ಕೂ ಹೆಚ್ಚು ಸಿಬ್ಬಂದಿ, 3 ಪಶುವೈದ್ಯರು ಹಾಗೂ 6 ಕುಮ್ಕಿ ಆನೆಗಳು ಭಾಗವಹಿಸಿ ಕಾರ್ಯಾಚರಣೆ ಯಶಸ್ವಿಯಾಗಿದೆ.

 

 

 

 

ಸಿದ್ದಾಪುರ ಪೇಟೆ, ಹೆನ್ನಾಬೈಲು, ಉರಪಾಲು ಕಾಡುಗಳಲ್ಲಿ ಆನೆ ಅಲೆದಾಡುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ನೀಡಲಾಗಿತ್ತು. 

 

ಚಿಕ್ಕಮಗಳೂರು ಎಲಿಫೆಂಟ್ ಟಾಸ್ಕ್ ಫೋರ್ಸ್ (ETF), ಕುದುರೆಮುಖ, ಶಿವಮೊಗ್ಗ, ಕುಂದಾಪುರ, ಅಮಾಸೆಬೈಲು, ನಗರ ವನ್ಯಜೀವಿ ವಿಭಾಗಗಳು ಮತ್ತು ಶಂಕರನಾರಾಯಣ ವಲಯದ ಅರಣ್ಯ ಅಧಿಕಾರಿಗಳ ತಂಡ ರೇಡಿಯೋ ಕಾಲರ್ ಮೂಲಕ ಆನೆಯನ್ನು ಪತ್ತೆಹಚ್ಚಿದರು.

 

 

ಸಂಜೆ 5:30ಕ್ಕೆ ಮಲಗಿಸುವ ಉದ್ದೇಶದಿಂದ ಮಂಜುವಿನ ತೂರಿಕೆ (ಅರಿವಳಿಕೆ) ನೀಡಲಾಗಿತ್ತು. ಆದರೆ, ಆನೆ 1.5 ಕಿಮೀ ದೂರದ ವನ್ಯಪ್ರದೇಶದಲ್ಲಿ ಕುಸಿದು ಬಿದ್ದು, ಬಳಿಕ ಸಕ್ರೆಬೈಲು ಶಿಬಿರಕ್ಕೆ ಸ್ಥಳಾಂತರಿಸಲಾಯಿತು ಎಂದು ತಿಳಿದು ಬಂದಿದೆ.

 

 ಕಾರ್ಯಾಚರಣೆಯಲ್ಲಿ ಭೀಮ, ಬಹದ್ದೂರ್, ಬಾಲಚಂದ್ರ, ಸೋಮಣ್ಣ ಇತ್ಯಾದಿ ಕುಮ್ಕಿ ಆನೆಗಳು ಪ್ರಮುಖ ಪಾತ್ರವಹಿಸಿವೆ.

 

 

ಭದ್ರತಾ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಳಿಸಿದ್ದು, ಸಾರ್ವಜನಿಕರಿಗೆ ಧ್ವನಿವರ್ಧಕ ಮೂಲಕ ಮುನ್ನೆಚ್ಚರಿಕೆಗಳನ್ನು ನೀಡಲಾಯಿತು. ಅದಲ್ಲದೆ ಸಿದ್ದಾಪುರ-ಹೊಸಂಗಡಿ ರಾಜ್ಯ ಹೆದ್ದಾರಿ 4 ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು.

 

 

ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು, “ಸಾರ್ವಜನಿಕರಿಗೆ ಹಾನಿಯಾಗದಂತೆ ಆನೆಯನ್ನು ಸಂಪೂರ್ಣ ಭದ್ರತೆಯಿಂದ ಸೆರೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

 

 

ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮು ಬಾಬು ಅವರು, ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನೆರವೇರಿಸಿ ಆನೆಯನ್ನು ಸಕ್ರೆಬೈಲಿಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದರು.