ಕಾಸರಗೋಡು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಇದರ ವತಿಯಿಂದ, ಇದೇ ಬರುವ ಜೂನ್15 ರವಿವಾರದಂದು ಕಾಸರಗೋಡಿನಲ್ಲಿ ಭಜನಾ ಕಮ್ಮಟವನ್ನು ಆಯೋಜಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇದು ಕಾಸರಗೋಡು ನಗರದಲ್ಲಿ ನಡೆಯುತ್ತಿರುವ ಮೊಟ್ಟಮೊದಲ ಭಜನಾ ಕಮ್ಮಟವಾಗಿದ್ದು, ಇದರ ಹಿನ್ನೆಲೆಯಲ್ಲಿ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಸಿದ್ಧತಾ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಭಜನಾ ಪರಿಷತ್ ಅಧ್ಯಕ್ಷರಾದ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಅವರು ಕಮ್ಮಟದ ಸಂಯೋಜನೆ ಹಾಗೂ ರೂಪುರೇಖೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಸದಸ್ಯರು ಮಾಡಬೇಕಾದ ಕೆಲಸಗಳನ್ನು ವಿಂಗಡಿಸಿ ವಿವರಿಸಿದರು. ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಅವರು ಊರಿನ ಎಲ್ಲ ಭಜನಾಸಕ್ತರನ್ನು ಕಮ್ಮಟದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಸಭೆಯಲ್ಲಿ ಗೌರವಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ ಅವರು “ನಾವೆಲ್ಲರೂ ಭಜಕರಾದರೂ ಭಜನೆಯ ತಾತ್ವಿಕ ಹಾಗೂ ಶಿಸ್ತಿನ ಬಗ್ಗೆ ಸರಿಯಾದ ಅರಿವು ಬಹುತೇಕ ವಿರಳವಾಗಿದೆ. ಇಂಥ ಭಜನಾ ಕಮ್ಮಟಗಳು ಅಂತಹ ಜ್ಞಾನವನ್ನು ನೀಡಲು ಸಾಧ್ಯವಾಗಿರುವಂತಹದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಜೇಶ್ವರ ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ, ಶ್ರೀ ವೆಂಕಟ್ರಮಣ ದೇವಸ್ಥಾನದ ಪ್ರಮುಖರಾದ ಕೆ. ಎನ್. ರಾಮಕೃಷ್ಣ ಹೊಳ್ಳ, ಮಹಿಳಾ ಭಜನಾ ಸಂಘದ ಸದಸ್ಯರು, ವಿಶ್ವಕರ್ಮ ಭಜನಾ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಭಜನಾ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿಯಾದ ರೋಹಿತ್ ಮಧೂರು ನಿರ್ವಹಿಸಿ ವಂದಿಸಿದರು.