ಬೆಂಗಳೂರು: ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಪ್ರಾರಂಭದಲ್ಲೇ ಕುತ್ತು: ರಮೇಶ್ ಬಾಬು ವಿರುದ್ಧ ಹಿಂದೂ ಮುಖಂಡ ತೇಜಸ್ ಗೌಡ ದೂರು!

  • 09 Jun 2025 07:02:02 PM


ಬೆಂಗಳೂರು: ಕರ್ನಾಟಕ ವಿಧಾನಪರಿಷತ್ ನಾಮನಿರ್ದೇಶಿತ ಸದಸ್ಯ ಸ್ಥಾನಕ್ಕೆ ರಾಜ್ಯ ಸರ್ಕಾರ ನಾಮಕರಣ ಮಾಡಿರುವ ನಾಲ್ಕು ಜನ ಸದಸ್ಯರಲ್ಲಿ ಒಬ್ಬರಾದ ರಮೇಶ್ ಬಾಬು ಅವರ ವಿರುದ್ಧ ಈಗ ಆಕ್ಷೇಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ವಿವಾದ ಉಂಟಾಗಿರುತ್ತದೆ.

 

ಹಿಂದೂ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರರಾದ ತೇಜಸ್ ಗೌಡ ಅವರು ರಾಜ್ಯಪಾಲರಿಗೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ (ED) ಜೂನ್ 9 ರಂದು ಈ ಕುರಿತಾಗಿ ದೂರು ಸಲ್ಲಿಸಿದ್ದಾರೆ. 

 

ರಮೇಶ್ ಬಾಬು ಅವರ ವಿರುದ್ಧ 100ಕ್ಕೂ ಹೆಚ್ಚು ಪುಟಗಳ ದಾಖಲೆಗಳೊಂದಿಗೆ ಈ ದೂರು ನೀಡಲಾಗಿದೆ ಎಂದು ತಿಳಿದು ಬಂದಿರುತ್ತದೆ.

 

ಭ್ರಷ್ಟಾಚಾರ, ಭೂಕಬಳಿಕೆ ಮತ್ತು ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗೆ ನಾಮನಿರ್ದೇಶನ ಸದುಪಯೋಗವಾಗದು ಎಂಬುದಾಗಿ ತೇಜಸ್ ಗೌಡ ಅವರು ಹೇಳಿದ್ದಾರೆ.

 

ತೇಜಸ್ ಗೌಡ ಅವರ ದೂರಿನ ಪ್ರಕಾರ, ರಮೇಶ್ ಬಾಬು ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. (ಪಿಸಿಆರ್ ಸಂಖ್ಯೆ 500/2015, ಸಿಸಿ ಸಂಖ್ಯೆ 626/2016), ಈ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದೆ.

 

ಅದಲ್ಲದೆ ಉತ್ತರಹಳ್ಳಿಯ ಉತ್ತರಿ ಗ್ರಾಮದಲ್ಲಿ ಭೂ ಅಪಹರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣವೂ ದಾಖಲಾಗಿದೆ. ಜೊತೆಗೆ, ನರಸಿಂಹಮೂರ್ತಿ ಎಂಬ ವೃದ್ಧರಿಗೆ ಜೀವಭಯವಿದೆ ಎಂಬ ಆರೋಪ ಕೂಡ ಇದೆ ಎಂದು ಕೇಳಿ ಬರುತ್ತಿದೆ.

 

ದೂರುದಾರರು ಭಾರತೀಯ ಸಂವಿಧಾನದ ವಿಧಿ 171(5) ಅನ್ನು ಉಲ್ಲೇಖಿಸಿ, ವಿಧಾನಪರಿಷತ್‌ನ ನಾಮನಿರ್ದೇಶನ ಸಾಮರ್ಥ್ಯವು ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರಿ ಚಳವಳಿ ಅಥವಾ ಸಾಮಾಜಿಕ ಸೇವೆಯಲ್ಲಿ ಪರಿಣತಿ, ಅನುಭವ ಹೊಂದಿದವರಿಗಷ್ಟೆ ಅನ್ವಯಿಸಬೇಕು ಎಂಬುದಾಗಿ ಮನವಿ ಮಾಡಿದ್ದಾರೆ. 

 

ಅಂತಹ ಮಾನದಂಡಗಳಿಗೆ ತಕ್ಕದ್ದಲ್ಲದ ವ್ಯಕ್ತಿಗೆ ಸದಸ್ಯ ಸ್ಥಾನ ನೀಡಿದರೆ, ಮುಂದೆ ಅಧಿಕಾರ ದುರುಪಯೋಗವಾಗುವ ಅಪಾಯವಿದೆ ಎಂದು ತೇಜಸ್ ಗೌಡ ಎಚ್ಚರಿಸಿದ್ದಾರೆ.