ಉಡುಪಿ: ಜಿಲ್ಲೆಯಲ್ಲಿ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಜೂನ್ 12ರಂದು ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಯಿಂದ ಈ ಆದೇಶ ಹೊರಡಿಸಲಾಗಿದೆ.
ಆದರೆ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಡಿಪ್ಲೋಮಾ ಮತ್ತು ಐಟಿಐ ಕಾಲೇಜುಗಳಿಗೆ ಯಾವುದೇ ರಜೆ ಇರುವುದಿಲ್ಲ.
ಈ ಎಲ್ಲಾ ವಿದ್ಯಾಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಮಕ್ಕಳನ್ನು ತಗ್ಗು ಪ್ರದೇಶಗಳು, ನದಿತೀರ, ಸರೋವರ ಮತ್ತು ಕಡಲ ತೀರಕ್ಕೆ ಹೋಗದಂತೆ ಪೋಷಕರು ಗಮನ ವಹಿಸಬೇಕೆಂದೂ ಮೀನುಗಾರರೂ ನೀರಿಗೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ.
ತಹಶೀಲ್ದಾರರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕಡ್ಡಾಯವಾಗಿ ಲಭ್ಯವಿರಬೇಕು. ನೋಡಲ್ ಅಧಿಕಾರಿಗಳು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುದಾಗಿ ತಿಳಿಸಿದ್ದಾರೆ
ತುರ್ತು ಸಂದರ್ಭದಲ್ಲಿ ಜನರು ನಿಯಂತ್ರಣ ಕೊಠಡಿಯನ್ನು 1077 ಟೋಲ್ ಫ್ರೀ ಸಂಖ್ಯೆ ಅಥವಾ 0820-2574802 (ಉಡುಪಿ) ಮೂಲಕ ಸಂಪರ್ಕಿಸಬಹುದು.
ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರು ಹಾಗೂ ನಿವಾಸಿಗಳು ಕಡಲ ತೀರ, ನದಿ ಹಾಗೂ ಜಲಪಾತಗಳ ಕಡೆಗೆ ಹೋಗುವಂತಿಲ್ಲ. ಈ ಪ್ರದೇಶಗಳಲ್ಲಿ ಫೋಟೋ ಅಥವಾ ವೀಡಿಯೋ ತೆಗೆಯುವುದು ಕೂಡ ನಿಷಿದ್ಧವಾಗಿದೆ ಎಂದು ತಿಳಿಸಿದೆ.