ಮಂಗಳೂರು: ಬಜ್ಪೆ ಸಮೀಪದ ಕಿನ್ನಿಪದವು ಎಂಬಲ್ಲಿ ಮೇ 1ರಂದು ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಇದೀಗ ರಾಷ್ಟ್ರೀಯ ತನಿಖಾ ದಳ (NIA) ಅಧಿಕೃತವಾಗಿ ಕೈಗೆತ್ತಿಕೊಂಡಿದೆ.
ಮಂಗಳೂರಿಗೆ ಆಗಮಿಸಿದ NIA ತಂಡ ಇದೀಗ ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಂಡಿದೆ.
ಡಿ.ಎಸ್.ಪಿ. ಪವನ್ ಕುಮಾರ್ ನೇತೃತ್ವದ ಎನ್ಐಎ ತಂಡವು ಶನಿವಾರ ಬೆಂಗಳೂರಿನಿಂದ ಮಂಗಳೂರಿಗೆ ಬಂದು, ಸ್ಥಳೀಯ ಸಿಸಿಬಿ (CCB) ಅಧಿಕಾರಿಗಳಿಂದ ಹತ್ಯೆಗೆ ಸಂಬಂಧಿಸಿದ ಸಾಕ್ಷ್ಯ, ತನಿಖಾ ದಾಖಲೆಗಳು ಮತ್ತು ನಿಖರ ಮಾಹಿತಿ ಪಡೆಯುತ್ತಿರುವುದಾಗಿ ಮೂಲಗಳಲಿಂದ ತಿಳಿದು ಬಂದಿದೆ
ಈ ಹಿಂದೆ ಮೇ 1ರ ರಾತ್ರಿ ಬಜ್ಪೆ ಬಳಿಯ ಕಿನ್ನಿಪದವಿಯಲ್ಲಿ ಸುಹಾಸ್ ಶೆಟ್ಟಿಯವರನ್ನು ಬರ್ಬರವಾಗಿ ತಲ್ವಾರ್ ಬಳಸಿ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಈ ದಾರುಣ ಘಟನೆಯ ನಂತರ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಘಟನೆಯಲ್ಲಿಯು ಸಂಘಟಿತ ಶಂಕಿತ ವ್ಯವಸ್ಥೆಯ ಭಾಗವೆಂದು ಆರೋಪಗಳು ಕೇಳಿಬಂದಿದ್ದು, ಇದೇ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಲಾಗಿದೆ.
ಪೊಲೀಸರು ಈವರೆಗೆ 11 ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರಿಸುತ್ತಿದ್ದಾರೆ.
ಪ್ರಕರಣ ಸಂಬಂಧ ರಾಜಕೀಯ ಮುಖಂಡರು, ಸಂಘಟನೆಗಳು ಮತ್ತು ಸಾರ್ವಜನಿಕರು ಎನ್ಐಎ ತನಿಖೆಗೆ ಆಗ್ರಹಿಸಿದ್ದರಿಂದ, ಕೇಂದ್ರ ಗೃಹ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ.