ಪೆರ್ಲ: ಭಾನುವಾರದಿಂದ ಆರಂಭಗೊಂಡ ಭಾರೀ ಮಳೆಯಿಂದಾಗಿ ಅನೇಕ ಕಡೆ ತೀವ್ರ ಹಾನಿಗೆ ಕಾರಣವಾಗಿದೆ.
ಕಾಟುಕುಕ್ಕೆ ಗ್ರಾಮದ ವಾಟೆ ಎಂಬಲ್ಲಿ ಒಂದು ಭೀಕರ ಘಟನೆ ಸಂಭವಿಸಿರುತ್ತದೆ.
ನಾರಾಯಣ ನಾಯ್ಕ ಎಂಬವರ ಮನೆಯ ಹಿಂದೆ ಇದ್ದ ಗುಡ್ಡ ಕುಸಿದು ಬಿದ್ದು, ಅವರ ಮನೆ ಸಂಪೂರ್ಣವಾಗಿ ಧ್ವಂಸವಾಗಿದೆ.
ಈ ಘಟನೆ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಂಭವಿಸಿದ್ದು, ಘಟನೆಯ ಸಮಯದಲ್ಲಿ ನಾರಾಯಣ ನಾಯ್ಕ ಹಾಗೂ ಅವರ ಪತ್ನಿ ಕೂಲಿ ಕೆಲಸಕ್ಕಾಗಿ ಮನೆಬಿಟ್ಟು ಹೋಗಿದ್ದರೆಂದೂ ಮನೆಯಲ್ಲಿ ಇದ್ದ 11 ಹಾಗೂ 14 ವರ್ಷದ ಇಬ್ಬರು ಮಕ್ಕಳು ಮಳೆ ಮತ್ತು ಗಾಳಿಗೆ ಹೆದರಿ ಮನೆಯ ಹೊರಗೆ ಬಂದಿದ್ದರಿಂದ ಅವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕುಸಿದ ಗುಡ್ಡದೊಂದಿಗೆ ಬೃಹತ್ ಗಾತ್ರದ ಕಲ್ಲುಗಳು ಮನೆಯೊಳಗೆ ನುಗ್ಗಿ ತೀವ್ರ ಹಾನಿ ಉಂಟುಮಾಡಿದ್ದು, ಶೀಟ್ ಛಾವಣಿಯ ಮನೆ ಸಂಪೂರ್ಣ ನಾಶವಾಗಿದೆ.
ಘಟನೆಯ ಮಾಹಿತಿ ತಿಳಿದ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ಹಾಗೂ ಸಾಮಾಜಿಕ ಕಾರ್ಯಕರ್ತ ಸುಧಾಕರ ಮಾಸ್ತರ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.