ಪುತ್ತೂರು: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜೂನ್ 23 ಬಿಜೆಪಿ ಧರಣಿ – ಮಾಜಿ ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಠಿ

  • 20 Jun 2025 01:04:22 PM


ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡುತ್ತಾ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತಗೊಂಡಿದ್ದು, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರವೇ ಆಡಳಿತದ ಶಕ್ತಿಯಾಗಿದೆ ಎಂಬುದಾಗಿ ಆರೋಪಿಸಿದರು.

 

ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿ, ಸಾಮಾನ್ಯ ಪ್ರಜೆಯು ಪ್ರತಿದಿನವೂ ಒಂದಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿರುವ ಸ್ಥಿತಿಯಿದೆ ಎಂದರು.

 

94ಸಿ ಭ್ರಷ್ಟಾಚಾರದಿಂದ ಹಿಡಿದು ವಾಲ್ಮೀಕಿ ನಿಗಮದ ದುರ್ಬಳಕೆ ತನಕ — ರಾಜ್ಯವ್ಯಾಪಿ ಲಾಂಛನಗೊಳಿಸಿರುವ ಭ್ರಷ್ಟಾಚಾರವನ್ನು ಉಲ್ಲೇಖಿಸಿದ ಅವರು, ದಕ್ಷಿಣ ಕನ್ನಡದಲ್ಲಿ ಮತೀಯ ಸಂಘರ್ಷಕ್ಕೆ ಸರ್ಕಾರವೇ ಪರೋಕ್ಷ ಬೆಂಬಲ ನೀಡುತ್ತಿದ್ದು, ಪೊಲೀಸರು ಒಂದು ಸಮುದಾಯದ ಮನೆಗಳಿಗೆ ಮಧ್ಯರಾತ್ರಿ ದಾಳಿ ನಡೆಸುತ್ತಿರುವುದು ಒಂದು ವರ್ಗದ ಜನತೆಯ ಸಂತುಷ್ಟಿಗಾಗಿ ಎಂಬುದಾಗಿ ಆರೋಪಿಸಿದರು.

 

ವಿದ್ಯುತ್ ದರ ಏರಿಕೆ, ಪೆನ್ಶನ್-ಗ್ರಾಚ್ಯುಟಿ ಮೇಲೆ ಹೆಚ್ಚುವರಿ ಶುಲ್ಕ, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ—ಎಲ್ಲವೂ ಜನಸಾಮಾನ್ಯರ ಬದುಕನ್ನು ಸಂಕಷ್ಟದತ್ತ ಒಯ್ಯುತ್ತಿದೆ ಅವರು ಹೇಳಿದರು.

 

ರೈತರ ವಿಷಯದಲ್ಲೂ, ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಹೆಸರಿನಲ್ಲಿ ವಂಚನೆಯಾಗುತ್ತಿದೆ ರೈತ ವಿದ್ಯಾನಿಧಿ ಸ್ಥಗಿತಗೊಂಡಿದೆ, ಕಿಸಾನ್ ಸಮ್ಮಾನ್ ನಿಧಿ ನೀಡಲಾಗುತ್ತಿಲ್ಲ, ಫಸಲು ವಿಮೆ ಕಡಿಮೆಯಾಗಿದೆ ಮತ್ತು ಹಾಲು ಸಹಾಯಧನ 6 ತಿಂಗಳುಗಳಿಂದ ಬಾಕಿಯಾಗಿದೆ. ಪರಿವರ್ತಕಗಳಿಗೆ ನಿರ್ಧರಿಸಿರುವ ₹3 ಲಕ್ಷ ದರ ರೈತರ ಭದ್ರತೆಗೆ ಹೊರೆಸುತ್ತಿದೆ ಎಂದೂ ಅದರ ಜೊತೆಗೆ , ವೃದ್ದಾಪ್ಯ ವೇತನ, ಅಂಗವಿಕಲ ಪಿಂಚಣಿ ಸೇರಿದಂತೆ 23.19 ಲಕ್ಷ ಫಲಾನುಭವಿಗಳಿಗೆ ನೀಡಬೇಕಾದ ಪಿಂಚಣಿಗಳನ್ನು ತಡೆಹಿಡಿಯಲಾಗಿದೆ. ಇದರಿಂದ ದುರ್ಬಲ ಹಾಗೂ ನಿರ್ಗತಿಕ ಜನರ ಬದುಕಿಗೆ ಕಷ್ಟಕರವಾಗಿದೆ ಎಂದು ಹೇಳಿದರು.

 

 ಮತೀಯ ಅಲ್ಪ ಸಂಖ್ಯಾತರನ್ನು ಒಲೈಸುವ ವೇಗದಲ್ಲಿ ಹಿಂದೂಗಳನ್ನು ದಮನಿಸುವ ಕೆಲಸ ಮಾಡುತ್ತಿದೆ. ಉರೂಸ್ ಗೆ 4 ಕೋಟಿ ನೀಡಿದರೆ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ದರ್ಶನಕ್ಕೆ 2000 ರೂ ನಿಗದಿ ಮಾಡುತ್ತಿದೆ. ದಕ್ಷಿಣ ಕನ್ನಡದಲ್ಲಿ ಹಿಂದೂ ಸಂಘಟನೆಯನ್ನು ಮೆಟ್ಟಿ ಹಾಕಲು ವಿಶೇಷ ಕೋಮು ನಿಗ್ರಹ ಪಡೆಯನ್ನು ರಚನೆ ಮಾಡುವ ಕೆಲಸ ಕಾಂಗ್ರೇಸ್ ಸರಕಾರ ಮಾಡುತ್ತಿದೆ ಎಂದೂ ಆರೋಪಿಸಿ ಉದಾಹರಣೆ ನೀಡಿದರು.

 

 

ದಿವಂಗತ ರಾಜೀವ ಗಾಂಧಿಯವರು ಕೇಂದ್ರದಲ್ಲಿ ಮಂಜೂರು ಮಾಡಿದ ಪಂಚಾಯತ್ ರಾಜ್ಯ ಕಾಯ್ದೆಗೆ ತಿಲಾಂಜಲಿ ನೀಡುವ ಕೆಲಸ ಸರಕಾರ ಮಾಡುತಿದೆ . ಉಚ್ಚನ್ಯಾಯಲಯಕ್ಕೆ ಮೇ ತಿಂಗಳಲ್ಲಿ ತಾಲೂಕು/ ಜಿಲ್ಲಾ ಪಂಚಾಯತ್ಗೆ ಚುನಾವಣೆ ಮಾಡುತ್ತದೆ ಎಂದು ಭರವಸೆ ಕೊಟ್ಟು ಚುನಾವಣೆಯನ್ನು ಮಾಡಲು ಕಾಲಹರಣ ಮಾಡುತ್ತಿದೆ ಎಂದರು.

 

 ಕೃಷಿ ಹಾನಿ, ಮನೆ, ಜಾನುವಾರು, ರಸ್ತೆ ಹಾನಿಯ ಮಾಹಿತಿಯ ನಡುವೆಯೂ ಸರಕಾರ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದ ಕೆಲಸವನ್ನು ಖಂಡಿಸಿದರು.

 

ಪಂಚಾಯತ್ ಕುರಿತು, ಕೇಂದ್ರದ ಅನುದಾನದ ಮೂಲಕ ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ರಾಜ್ಯದ 9/11 ಅನುದಾನವನ್ನು ಸ್ಥಳೀಯ ಪ್ರಾಧಿಕಾರಕ್ಕೆ ಒಪ್ಪಿಸಿ ಜನರಿಗೆ ಅನುಕೂಲವಾಗುವ ಬದಲು ಸಮಸ್ಯೆ ಉಂಟುಮಾಡಲಾಗಿದೆ ಎಂದೂ ಹೊಸ ಕಟ್ಟಡಗಳಿಗೆ ಗ್ರಾಮ ಪಂಚಾಯತ್‌ನ ಸ್ಥಳದಲ್ಲಿ ಸ್ಥಳೀಯ ಪ್ರಾಧಿಕಾರದ ಅನುಮತಿ ಕಡ್ಡಾಯ ಮಾಡುವ ಆದೇಶ, ಗ್ರಾಮೀಣ ಜನರ ನಿರ್ವಾಹಕ್ಕೆ ತೊಂದರೆಯನ್ನುಂಟುಮಾಡಿದೆ.

 

ಆದ್ದರಿಂದ ಇದೆಲ್ಲಕ್ಕೂ ವಿರೋಧವಾಗಿ, ಬಿಜೆಪಿಯು ಜನ ವಿರೋಧಿ ನೀತಿಗಳ ವಿರುದ್ಧ, ದಿನಾಂಕ 23/06/2025ರಂದು ಪುತ್ತೂರು ತಾಲೂಕಿನ ಎಲ್ಲಾ ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ನಗರಸಭೆ ಎದುರು ಒಂದು ದಿನದ ಧರಣಿ ಹಾಗೂ ಪ್ರತಿಭಟನೆ ಸಭೆ ಹಮ್ಮಿಕೊಳ್ಳಲು ತೀರ್ಮಾನಿಸಿದೆ ಎಂದು ಅವರು ತಿಳಿಸಿದ್ದಾರೆ.

 

 ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂಬ ವಿನಂತಿಯನ್ನು ಅವರು ಮುಂದಿಟ್ಟರು.

 

ಈ ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮರ್, ನಗರಸಭಾ ಉಪಾಧ್ಯಕ್ಷ ಬಾಲಚಂದ್ರ, ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷ ಹರೀಶ್ ಬಿಜದ್ರೆ ಮತ್ತು ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಅವರು ಉಪಸ್ಥಿತರಿದ್ದರು.