ಕಾರ್ಕಳ: ಕಾರ್ಕಳದ ಅತ್ತೂರಿನ ದೂಪದಕಟ್ಟೆ ಜಂಕ್ಷನ್ ಬಳಿ ಮಂಗಳವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿರುವುದಾಗಿ ವರದಿಯಾಗಿದೆ.
ಖಾಸಗಿ ಬಸ್ಗೆ ಬಿಎಂಡಬ್ಲ್ಯೂ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಗಂಭೀರ ಹಾನಿ ಉಂಟಾಗಿದೆ. ಈ ಅಪಘಾತದಿಂದ ಕೆಲಕಾಲ ಸ್ಥಳದಲ್ಲಿ ಸಂಚಾರ ವ್ಯತ್ಯಯ ಕೂಡ ಉಂಟಾಯಿತು.
ಖಾಸಗಿ ಬಸ್ ಮಂಗಳೂರಿನಿಂದ ಕಾರ್ಕಳದತ್ತ ಸಾಗುತ್ತಿತ್ತು. ಅದೇ ವೇಳೆ ಬಿಎಂಡಬ್ಲ್ಯೂ ಕಾರು ವಿರುದ್ಧ ದಿಕ್ಕಿನಿಂದ ಅತೀವೇಗದಲ್ಲಿ ಬರುತ್ತಿದ್ದಂತೆ ಡಿಕ್ಕಿ ಸಂಭವಿಸಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಅಪಘಾತದ ದೃಶ್ಯಗಳು ಹತ್ತಿರದ ವಾಹನದ ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಅದು ವೈರಲ್ ಆಗಿದೆ.
ಘಟನೆಯ ನಂತರ ಕಾರ್ಕಳ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಿದ್ದಾರೆ.
ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ದೂಪದಕಟ್ಟೆ ಜಂಕ್ಷನ್ ಇದೀಗ ಅಪಘಾತ ಪ್ರದೇಶವಾಗಿ ಪರಿಣಮಿಸುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯ ನಿವಾಸಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಅತ್ತೂರು ಚರ್ಚ್ ಕಡೆಯಿಂದ ಬರುವ ಅತೀವೇಗದ ವಾಹನಗಳು, ಮುಖ್ಯ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಅಪಾಯ ಉಂಟುಮಾಡುತ್ತಿದ್ದು, ಈ ಪ್ರದೇಶದಲ್ಲಿ ಪದೇಪದೆ ಅಪಘಾತಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಇದೇ ಜಂಕ್ಷನ್ ಬಳಿ ಖಾಸಗಿ ಬಸ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದ ಘಟನೆ ಕೂಡ ಸಂಭವಿಸಿದೆ ಎನ್ನಲಾಗಿದೆ.