ಸಕಲೇಶಪುರ: ರೈಲು ಸಂಚಾರ ಪುನಾರಂಭ; ಗುಡ್ಡಜರಿತದಿಂದ ಸ್ಥಗಿತಗೊಂಡಿದ್ದ ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ಮತ್ತೆ ಚಾಲನೆ!

  • 27 Jun 2025 09:16:26 PM


ಸಕಲೇಶಪುರ: ಬೆಂಗಳೂರು–ಮಂಗಳೂರು ರೈಲು ಮಾರ್ಗದಲ್ಲಿ ಯಡಕುಮೇರಿ ಹತ್ತಿರ ಜೂನ್ 21ರಂದು ಗುಡ್ಡಜರಿತದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ರೈಲು ಸಂಚಾರವು, ರೈಲ್ವೆ ಇಲಾಖೆಯ ಶೀಘ್ರ ಕಾರ್ಯಾಚರಣೆಯಿಂದ ಪುನಾರಂಭಗೊಂಡಿದೆ.

 

ಯಡಕುಮೇರಿ–ಶ್ರವಣ ಬೆಲಗೊಳ ಘಾಟ್ ಸೆಕ್ಷನ್‌ನಲ್ಲಿ ಜೂನ್ 21ರಂದು ಬೆಳಗ್ಗೆಯೇ ಬಂಡೆಗಳು ಹಳಿ ಮೇಲೆ ಕುಸಿದು ಸಂಚಾರ ಸ್ಥಗಿತಗೊಂಡಿತು.

 

ಆದರೆ ಕೂಡಲೇ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕ್ಲೀನ್‌ಅಪ್ ಕಾರ್ಯಾಚರಣೆ ನಡೆಸಿ ಹಳಿಯ ಮೇಲೆ ಬಿದ್ದ ಬಂಡೆಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿ ಹಳೆ ಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು.

 

ಸಂಜೆಯ ವೇಳೆಗೆ ತಾಂತ್ರಿಕ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ಬಳಿಕ, ರೈಲು ಸಂಚಾರ ಮತ್ತೆ ಆರಂಭಗೊಂಡಿದೆ. ಯಾವುದೇ ಅಪಾಯವಿಲ್ಲದೆ ರೈಲುಗಳು ನಿರ್ವಿಘ್ನವಾಗಿ ಚಲಿಸುತ್ತಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 

ಮಳೆಯ ಸಂದರ್ಭದಲ್ಲಿ ಈ ಭಾಗದಲ್ಲಿ ಇಂತಹ ಗುಡ್ಡಜರಿತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.