ಮಂಗಳೂರು: ಐಷಾರಾಮಿ ಕಾರು ನೋಂದಣಿಯಲ್ಲಿ ತೆರಿಗೆ ವಂಚನೆ – ಮಂಗಳೂರು ಆರ್‌ಟಿಒ ಕಚೇರಿಯ ಮೂವರು ಸಿಬ್ಬಂದಿಗೆ ಅಮಾನತು!

  • 28 Jun 2025 03:14:31 PM


ಮಂಗಳೂರು: ಕೋಟ್ಯಂತರ ರೂ. ಮೌಲ್ಯದ ಐಷಾರಾಮಿ ಕಾರು ನೋಂದಣಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ತೆರಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ಸಾರಿಗೆ ಇಲಾಖೆಯ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಅವರನ್ನು ಬೇರೆ ಕಚೇರಿಗಳಿಗೆ ವರ್ಗಾವನೆ ಮಾಡಲಾಗಿದೆ.

 

ಮಂಗಳೂರು ಆರ್‌ಟಿಒ ಕಚೇರಿಯಲ್ಲಿ ₹1,96,95,000 ಬೆಲೆಯ ಕಾರನ್ನು ಕೇವಲ ₹32,15,000 ಮೌಲ್ಯವೆಂದು ನೋಂದಣಿ ಮಾಡಿಸಿದ ಗಂಭೀರ ಆರೋಪ ಕೇಳಿಬಂದಿದೆ .

 

ಈ ಪ್ರಕರಣದ ತನಿಖೆಗಾಗಿ ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಕಚೇರಿಯ ಅಪರ ಆಯುಕ್ತರು ಮಂಗಳೂರು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 

 

ತನಿಖೆಯಲ್ಲಿ ಮೂವರು ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾಗಿದ್ದು

 ಪ್ರಥಮ ದರ್ಜೆ ಸಹಾಯಕ ನೀಲಪ್ಪ ಕೆ.ಎಚ್., ಕಚೇರಿ ಅಧೀಕ್ಷಕಿ ರೇಖಾ ನಾಯಕ್, ಮತ್ತು ಸಹಾಯಕಿ ಸರಸ್ವತಿ. ಈ ಮೂವರ ವಿರುದ್ಧ ಇಲಾಖಾ ವಿಚಾರಣೆಯೊಂದಿಗೆ ಅಮಾನತು ವಿಧಿಸಿ ಆದೇಶ ಹೊರಡಿಸಲಾಗಿದೆ.

 

ತನ್ನ ಅರ್ಜಿಯಲ್ಲಿ ಕಾರು ಮೌಲ್ಯವನ್ನು ಕಡಿಮೆ ತೋರಿಸಿದ್ದೇನು ಎಂಬ ಆರೋಪ ನೀಲಪ್ಪ ಮೇಲೆ ಇದ್ದು, ಆ ಅರ್ಜಿಯನ್ನು ರೇಖಾ ನಾಯಕ್ ಪರಿಶೀಲಿಸಿದ್ದರು. 

 

ನಂತರ ಸರಸ್ವತಿ ಅವರು ಅರ್ಜಿಗೆ ಅನುಮೋದನೆ ನೀಡಿದ್ದಾರೆಯೆಂಬ ಆರೋಪ ಬಂದಿರುತ್ತದೆ.

 

ತನಿಖೆಯ ನಂತರ ನೀಲಪ್ಪರನ್ನು ಶಿವಮೊಗ್ಗ, ರೇಖಾ ನಾಯಕ್ ಅವರನ್ನು ಚಿಕ್ಕಮಗಳೂರು, ಹಾಗೂ ಸರಸ್ವತಿಯನ್ನು ಬೆಂಗಳೂರು (ಉತ್ತರ) ಕಚೇರಿಗೆ ವರ್ಗಾವನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.