ರಿಪಬ್ಲಿಕ್ ಹಿಂದೂ:- ದಿನದಿಂದ ದಿನಕ್ಕೆ ಮುಡಾ ಹಗರಣದ ಹತ್ತಾರು ಅಕ್ರಮಗಳು ಬಯಲಾಗುತ್ತಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲುಪಡೆದಿದ್ದಾರೆ ಎನ್ನಲಾದ ಈ ಹಗರಣದಿಂದಾಗಿ ಕಾಂಗ್ರೆಸ್ ಪಕ್ಷ ಕಂಗಾಲಾಗುತ್ತಿದ್ದು, ಇದೀಗ ಈ ಭ್ರಷ್ಟಾಚಾರ ಹಗರಣಕ್ಕೆ ಮಹತ್ವದ ದಾಖಲೆ ಲಭ್ಯವಾಗಿದೆ. ಈ ಬಗೆಗಿನ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.
*2 ಸಾವಿರ ಸೈಟ್ ಗಳಿಗೆ ಮೂಲ ದಾಖಲೆಯೇ ಇಲ್ಲ...!*
ಹೌದು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ನಡೆದ ಕೋಟ್ಯಾಂತರ ರೂ. ಹಗರಣದಲ್ಲಿ ಇದೀಗ ಸಿಎಂ ಸಿದ್ಧರಾಮಯ್ಯ ಅವರು ಲಾಕ್ ಆಗುವ ಸಾಧ್ಯತೆ ಹೆಚ್ಚಾಗಿಯೇ ಕಾಣುತ್ತಿದೆ. ಇದರ ನಡುವೆ ಬಿರುಸಿನಲ್ಲಿ ಸಾಗುತ್ತಿರುವ ಇ.ಡಿ ತನಿಖೆಯಲ್ಲಿ ಶಾಕಿಂಗ್ ವಿಚಾರಗಳು ಬಯಲಾಗುತ್ತಲೇ ಇದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಂಚಿಕೆ ಮಾಡಿದ ಸುಮಾರು 2 ಸಾವಿರ ಸೈಟ್ಗಳಿಗೆ ಮೂಲ ದಾಖಲೆ ಇಲ್ಲದೇ ಇರುವ ವಿಚಾರ ಬೆಳಕಿಗೆ ಬಂದಿದೆ. ಮುಡಾ ಹಂಚಿಕೆ ಮಾಡಿದ 5 ಸಾವಿರ ಸೈಟ್ಗಳಲ್ಲಿ ಸುಮಾರು 2 ಸಾವಿರ ಸೈಟ್ಗಳಿಗೆ ಸಂಬಂಧಿಸಿದ ಯಾವುದೇ ಆಧಾರವಾಗಲಿ ಅಥವಾ ಯಾವುದೇ ಬಾಂಡ್ ಪೇಪರ್ಗಳೇ ಇಲ್ಲದಿರುವ ವಿಚಾರ ಜಾರಿ ನಿರ್ದೇಶನಾಲಯದ ತನಿಖೆಯ ವೇಳೆ ಬಯಲಾಗಿದೆ. ಈ ಮುಖೇನ ಮುಡಾದಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿರುವುದು ಮಾತ್ರ ಗ್ಯಾರಂಟಿ ಎಂಬುವುದು ಸಾಬೀತಾಗಿದೆ.
*50:50 ಅನುಪಾತದ ನಿಯಮ ಎಂದರೇನು?*
ರೈತರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡ ಭೂಮಿಯಲ್ಲಿ ಪ್ರಾಧಿಕಾರವು ಅಭಿವೃದ್ಧಿಪಡಿಸಿದ ಜಾಗದ ಶೇ. 50ರಷ್ಟು ಪಾಲನ್ನು ರೈತರಿಗೆ ಹಿಂದಿರುಗಿಸುವುದಕ್ಕೆ ಸಂಬಂಧಿಸಿದ ನಿಯಮವೇ 50:50 ಅನುಪಾತದ ನಿಯಮ. ಆದರೆ ಇದನ್ನೇ ಅಸ್ತ್ರವಾಗಿಸಿಕೊಂಡ ಖದೀಮರು 1950 ಸೈಟ್ಗಳನ್ನು ಪಡೆದಿದ್ದಾರೆ. 1950 ಸೈಟ್ಗಳ ಪೈಕಿ ಒಬ್ಬೊಬ್ಬರು 30, 40, 50 ಹೀಗೆ ಸೈಟ್ ಗಳನ್ನು ಪಡೆದುಕೊಂಡಿದ್ದಾರೆ. ಹಂಚಿಕೆ ಮಾಡಿದ ಒಟ್ಟು ಐದು ಸಾವಿರ ಸೈಟ್ ಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳು, ಬಾಂಡ್ ಪೇಪರ್ ಗಳು ನಾಪತ್ತೆಯಾಗಿರೋದು ಮಾತ್ರ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸೈಟ್ ಹಂಚಿಕೆ ಯಾರ ಯಾರ ನಡುವೆ ಆಗಿದೆ, ಅವರ ಹಿನ್ನೆಲೆಯೇನು, ದಾಖಲೆಗಳು ಎಲ್ಲಿ ಹೋದವು..? ಇದರ ಹಿಂದಿರುವ ಕೈ ಯಾವುದು..? ಈ ಎಲ್ಲ ಸತ್ಯಾಂಶಗಳನ್ನು ಕಲೆಹಾಕಲು ಇಡಿ ಮತ್ತೆ ತಮ್ಮ ತನಿಖೆಯನ್ನು ಭರದಿಂದ ಮುಂದುವರೆಸುತ್ತಿದೆ. ಒಟ್ಟಿನಲ್ಲಿ ಸಿಎಂ ಸಿದ್ಧರಾಮಯ್ಯನವರ ಕೊರಳಿಗೆ ಪಾಶವಾದ ಈ ಮೂಡಾ ಹಗರಣ ಇನ್ನು ಯಾವೆಲ್ಲ ತಿರುವುಗಳನ್ನು ಪಡೆದುಕೊಳ್ಳುತ್ತದೆ ಮತ್ತು ಸಿಎಂ ಕುರ್ಚಿ ಬಿಟ್ಟು ಸಿಎಂ ಸಿದ್ದು ಕಂಬಿ ಎಣಿಸ್ತಾರಾ ಕಾದುನೋಡಬೇಕಿದೆ.