ರಿಪಬ್ಲಿಕ್ ಹಿಂದೂ:- ಹಿಂದೂಗಳು ಆರಾಧಿಸುವ ಅದೆಷ್ಟೋ ದೇಗುಲಗಳಲ್ಲಿ ಶಬರಿಮಲೆಯೂ ಒಂದು. ವರ್ಷದಲ್ಲಿ ಒಂದು ಬಾರಿ ಹಿಂದೂ ಪುರುಷರು ಅದೆಷ್ಟೋ ತಿಂಗಳುಗಳ ಕಾಲ ವೃತಧಾರಿಗಳಾಗಿ ಮಾಲೆಯನ್ನು ಧರಿಸಿ ಸಸ್ಯಾಹಾರಿಗಳಾಗಿದ್ದುಕೊಂಡು ಭಕ್ತಿ, ಶ್ರದ್ಧೆಯಿಂದ ಅಯ್ಯಪ್ಪಸ್ವಾಮಿಯನ್ನು ಆರಾಧಿಸುತ್ತಾರೆ. ಭಕ್ತಾದಿಗಳು ಶಬರಿಮಲೆಗೆ ತೆರಳುವ ಸೀಸನ್ ಇದಾಗಿದ್ದು ಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಲಿದ್ದು, ಡಿ.25 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
*ಪ್ರತಿನಿತ್ಯ 70 ಸಾವಿರ ಜನರಿಗೆ ದರ್ಶನಕ್ಕೆ ಅವಕಾಶ*
ಇಂದು ಅಯ್ಯಪ್ಪ ಸ್ವಾಮಿ ದರ್ಶನ ಸೇರಿದಂತೆ ಮಂಡಲ ಪೂಜೆಯೂ ಪ್ರಾರಂಭಗೊಳ್ಳಲಿದೆ. ಭಕ್ತರು ಈ ಪೂಜೆಗಾಗಿ ಶ್ರದ್ಧಾಭಕ್ತಿಯಿಂದ ಅದೆಷ್ಟೇ ಸಮಯವಾದರೂ ಕಾಯುತ್ತಾರೆ. ದರ್ಶನ ಅವಧಿಯನ್ನು 18 ಗಂಟೆಗೆ ವಿಸ್ತರಿಸಲಾಗಿದ್ದು, ಪ್ರತಿ ನಿತ್ಯ 70,000 ಜನರಿಗೆ ದರ್ಶನ ಅವಕಾಶ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಜೊತೆಗೆ ಜನಸಂದಣಿ ಹೆಚ್ಚಾದಲ್ಲಿ ಸಮಯವನ್ನು ಅರ್ಧಗಂಟೆ ವಿಸ್ತರಿಸುವಂತೆ ನಿರ್ಧಾರ ಮಾಡಲಾಗಿದ್ದು ದೇಗುಲದ ನಿಯಮವನ್ನು ಪ್ರತಿಯೊಬ್ಬ ಭಕ್ತನೂ ಪಾಲಿಸುವಂತೆ ಕೋರಲಾಗಿದೆ.
*ಭಕ್ತರ ನೂಕುನುಗ್ಗಲು ಕಡಿಮೆಗೊಳಿಸಲು ವಿಶೇಷ ವ್ಯವಸ್ಥೆ*
ಶಬರಿಮಲೆಯಲ್ಲಿ ಪ್ರತೀ ಬಾರಿ ಕೂಡಾ ಜನಸಂದಣಿ ದಟ್ಟವಾಗಿರುತ್ತದೆ. ಸುಮಾರು 60,000 ಜನರು ವರ್ಚುವಲ್ ಸರತಿ ವ್ಯವಸ್ಥೆಯ ಮೂಲಕ ದರ್ಶನವನ್ನು ಪಡೆಯುತ್ತಾರೆ. ಇನ್ನೂ 10,000 ಜನರು ಸ್ಥಳದಲ್ಲೇ ಬುಕ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಶಬರಿಮಲೆ ದೇವಸ್ಥಾನ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಮಾತನಾಡಿ, ತೀರ್ಥೋದ್ಭವದ ಆರಂಭದಿಂದ ಪ್ರತಿದಿನ ಬೆಳಗ್ಗೆ 3 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 11 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಇದರಿಂದಾಗಿ ಭಕ್ತರ ನೂಕುನುಗ್ಗಲನ್ನು ನಿಯಂತ್ರಿಸುವ ಯೋಜನೆಯನ್ನು ಹೊಂದಿದ್ದೇವೆ. ಇನ್ನು ಸ್ಪಾಟ್ ಬುಕಿಂಗ್ ಆಯ್ಕೆ ಮಾಡಿಕೊಳ್ಳುವ ಭಕ್ತರು ತಮ್ಮ ಗುರುತಿನ ಆಧಾರವಾಗಿ ಆಧಾರ್ ಕಾರ್ಡ್ನ್ನು ತೋರಿಸುವುದು ಕಡ್ಡಾಯವಾಗಿದೆ. ಅದಿಲ್ಲದೆ ಹೋದಲ್ಲಿ ಬುಕ್ಕಿಂಗ್ ಮಾಡಿಕೊಡಲಾಗುವುದಿಲ್ಲ. ಸ್ಥಳದಲ್ಲಿಯೇ ಬುಕ್ಕಿಂಗ್ ಮಾಡಲು ಪಂಪಾ, ಎರುಮೇಲಿ ಮತ್ತು ವಂಡಿಪೆರಿಯಾರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಲವಾರು ಕೌಂಟರ್ಗಳನ್ನು ಸ್ಥಾಪಿಸಲಾಗಿದೆ. ಭಕ್ತರು ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.