ಮಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66 ರ ಕೆಐಒಸಿಎಲ್ ಜಂಕ್ಷನ್ ಮತ್ತು ಕೂಳೂರು ಕಮಾನು ಸೇತುವೆಯ ನಡುವಿನ ಸಂಪರ್ಕ ರಸ್ತೆಗೆ ತೀವ್ರ ಹಾನಿಯಾಗಿದ್ದು, ಹದಗೆಟ್ಟಿರುವ ರಸ್ತೆಯಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರು ಮತ್ತು ವಾಹನ ಚಾಲಕರಿಗೆ ಅನಾನುಕೂಲತೆ ಉಂಟಾಗುತ್ತಿದೆ. ಆದ್ದರಿಂದ ಈ ಮಾರ್ಗದಲ್ಲಿನ ವಾಹನ ಸಂಚಾರ ಅಪಾಯಕಾರಿಯಾಗಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದುರಸ್ತಿ ಕಾರ್ಯ ಕೈಗೊಳ್ಳಲು ಮುಂದಾಗಿದೆ.
ನಿರಂತರ ಮಳೆಯ ಪರಿಣಾಮ ಸಣ್ಣಪುಟ್ಟ ದುರಸ್ತಿಗಳಿಂದ ಪ್ರಯೋಜನವಾಗದೇ, ಡಾಂಬರೀಕರಣವೂ ಸಾಧ್ಯವಾಗದ ಪರಿಸ್ಥಿತಿಯಾದುದರಿಂದ ಪೇವರ್ ಬ್ಲಾಕ್ ದುರಸ್ತಿ ಕಾರ್ಯ ನಡೆಸಲು NHAI ನಿರ್ಧರಿಸಿದೆ.
ಆದುದರಿಂದ ಜುಲೈ 21ರಂದು ರಾತ್ರಿ 8 ಗಂಟೆಯಿಂದ ಜುಲೈ 24ರ ಬೆಳಿಗ್ಗೆ 8 ಗಂಟೆಯವರೆಗೆ ಸೇತುವೆಯ ಮೇಲಿನ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ವೇಳೆ ಸಾರ್ವಜನಿಕರು ಮತ್ತು ವಾಹನ ಚಾಲಕರು ಸಹಕಾರ ನೀಡಬೇಕೆಂದು ಪ್ರಾಧಿಕಾರ ಮನವಿ ಮಾಡಿದೆ.