ಎಲೆಚುಕ್ಕಿ ಹಳದಿ ಎಲೆರೋಗದಿಂದ ಬೇಸತ್ತ ಕೃಷಿಕರ ನೆರವಿಗೆ ನಿಂತ‌ ಕ್ಯಾಪ್ಟನ್!; ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಬ್ರಿಜೇಶ್ ಚೌಟ...

  • 29 Nov 2024 12:23:32 PM


ದಕ್ಷಿಣ ಕನ್ನಡ: ದ.ಕ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯಾದ ಅಡಕೆಗೆ ವಿಶೇಷವಾದ ಪ್ರಾಶಸ್ತ್ಯವಿದೆ ಮತ್ತು ಬೇಡಿಕೆಯಿದೆ.‌ ಆದರೆ ಇತ್ತೀಚಿನ ದಿನಗಳಲ್ಲಿ ಎಲೆಚುಕ್ಕಿ ಹಳದಿ ರೋಗದಿಂದ ಬೆಳೆಗಳನ್ನು ಬಾಧಿಸಿರುವುದು ಕೃಷಿಕರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ. ಈ ಹಿನ್ನೆಲೆ ಅಡಕೆ ಕೃಷಿಕರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ನೆರವಿಗೆ ಧಾವಿಸುವಂತೆ ಮನವಿ ನೀಡಿದ್ದಾರೆ.

ಸಂಸದರು ಕೇಂದ್ರ ಸಚಿವರಲ್ಲಿ ಇಟ್ಟ ಬೇಡಿಕೆಯೇನು..?

ದ.ಕ ಜಿಲ್ಲೆಯಲ್ಲಿ ಈ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗದಿಂದ ಅಡಿಕೆ ಬೆಳೆಗಾರರು ಕಂಗಾಲಾಗಿರುವ ಬಗ್ಗೆ ಮತ್ತು ಸಮಸ್ಯೆಯ ಗಂಭೀರತೆಯ ಬಗ್ಗೆ ಸಂಸದರು ಸಚಿವರಿಗೆ ಮನವರಿಕೆ ಮಾಡಿದ್ದಾರೆ. ಈಗಾಗಲೇ ಅಧಿವೇಶನದ ಪ್ರಯುಕ್ತ ನವದೆಹಲಿಯಲ್ಲಿರುವ ಇವರು ಖುದ್ದಾಗಿ ಕೇಂದ್ರ ಕೃಷಿ ಸಚಿವ 

ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ್ದಾರೆ. ನಂತರ ಈ ಬಗ್ಗೆ ಮನವಿ ನೀಡಿದ ಅವರು `ಅತಿವೃಷ್ಟಿ, ಹವಾಮಾನ ಬದಲಾವಣೆ ಇಂತಹ ಅನೇಕ ಸಮಸ್ಯೆಗಳಿಂದ ಮೊದಲೇ ಥ್ತರಿಸಿ ಹೋಗಿರುವ ಕೃಷಿಕರಿಗೆ ಈ ಎಲೆಚುಕ್ಕಿ ರೋಗ ಮತ್ತೊಂದು ದೊಡ್ಡ ಬಾಧೆಯಾಗಿ ಪರಿಣಮಿಸಿದೆ. ಇದರಿಂದ ಇಳುವರಿ ಕೂಡಾ ಕಡಿಮೆಯಾಗುತ್ತಿದ್ದು ಆರ್ಥಿಕ ಲಾಭವೂ ನೆಲಕಚ್ಚಿದೆ' ಎಂದು ತಿಳಿಸಿದರು. 

ಅಡಕೆ ಕ್ಯಾನ್ಸರ್ ಕಾರಕ ಎಂಬ ವರದಿಯೂ ದಿಗಿಲು ಹುಟ್ಟಿಸಿದೆ- ಸಂಸದ ಕ್ಯಾ.ಚೌಟ...

ಇನ್ನು ಅಡಕೆ ಬೆಳೆಗಾರರು ಎದುರಿಸುತ್ತಿರುವ ಸವಾಲುಗಳನ್ನು ಮತ್ತು ಸಮಸ್ಯೆಗಳನ್ನು ಮನಮುಟ್ಟುವಂತೆ ಸಚಿವರಿಗೆ ತಿಳಿಸಿದ ಸಂಸದರು ಇತ್ತೀಚೆಗೆ ಅಂತರಾಷ್ಟ್ರೀಯ ಕ್ಯಾನ್ಸರ್ ಸಂಶೋಧನೆಗೆ ಸಂಬಂಧಿಸಿದ ಐಎಆರ್ ಸಿ ಸಂಸ್ಥೆ ಕೂಡಾ ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದು ಮಾಹಿತಿ ನೀಡಿರುವುದರ ಕುರಿತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸುವಂತೆ ಬಿನ್ನೈಸಿಕೊಂಡಿದ್ದಾರೆ. ಆದಷ್ಟು ಶೀಘ್ರವಾಗಿ ಪರಿಹಾರ ಒದಗುಸಿಕೊಡುವಂತೆ ಕೇಂದ್ರ ಕೃಷಿ ಸಚಿವರು ಕೂಡಾ ಭರವಸೆ ನೀಡಿದ್ದಾರೆ.