ದೈವ ಸಾನಿಧ್ಯ ನಾಶಗೈದು ಮರಳುಗಾರಿಕೆ ನಡೆಸಿದ ಕುತಂತ್ರಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು...? ಆಮೇಲೆನಾಯ್ತು ಗೊತ್ತಾ...?

  • 30 Nov 2024 06:50:29 PM


ದಕ್ಷಿಣ ಕನ್ನಡ:- ದ.ಕ ಜಿಲ್ಲೆಯಲ್ಲಿ ನಿರ್ಭೀತಿಯಿಂದ, ಯಾವ ಕಾನೂನಿನ ಭಯವೂ ಇಲ್ಲದೆ ಮರಳುಕೋರರು ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದಾರೆ‌. ಇದೀಗ ಗ್ರಾಮಸ್ಥರೇ ಸೇರಿ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದ ಭೂಪರ ಹೆಡೆಮುರಿಕಟ್ಟಿದ ಘಟನೆಯೊಂದು ನಡೆದಿದೆ.

 

ಮರಳುಗಾರಿಕೆ ನಡೆಸಲು ಬಂದವರ ಬೋಟ್ ಕಟ್ಟಿಹಾಕಿದ ಗ್ರಾಮಸ್ಥರು...!!

 

ಅಕ್ರಮವಾಗಿ ಮರಳು ಸಾಗಿಸಲು ಬಂದವರ ಬೋಟನ್ನು ನದಿಯ ಪೊದೆಗೆ ಊರವರೇ ಸೇರಿ ಕಟ್ಟಿ ಹಾಕಿದ ಘಟನೆ ಕಾಣಿಯೂರು ಸಮೀಪದ ಚಾರ್ವಾಕ ಎಂಬ ಗ್ರಾಮದಲ್ಲಿ ನಡೆದಿದೆ. ಇದರ ವಿರುದ್ಧ ಪ್ರಕರಣ ದಾಖಲಾಗುತ್ತದೆ ಎಂದು ಮೊದಲೇ ತಿಳಿದ ಗ್ರಾಮಸ್ಥರು ಸಂಜೆ ವೇಳೆ ಠಾಣೆಗೆ ಜಮಾಯಿಸಿದ್ದಾರೆ. ಕುಮಾರಧಾರಾ ನದಿಯಲ್ಲಿ ಮರಳುಗಾರಿಕೆ ನಡೆಸಲು ಆಗಾಗ ತಂಡವೊಂದು ಆಗಮಿಸುತ್ತಿತ್ತು. ಅದು ಮಾಹಿತಿ ತಿಳಿದ ಕೂಡಲೇ ದೇಗುಲದ ಪ್ರಮುಖರು, ಊರ ಮುಖಂಡರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

 

ಕಡಬ ಠಾಣೆಯಲ್ಲಿ ನಡೆದಿದ್ದೇನು..?

 

ಬೋಟನ್ನು ಕಟ್ಟಿ ಹಾಕಿದ ವಿಚಾರವಾಗಿ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಓರ್ವ ವ್ಯಕ್ತಿಯನ್ನು ಠಾಣೆಗೆ ವಿಚಾರಣೆಗೆಂದು ಕರೆದಿದ್ದರು. ಆದರೆ ಅವರು ಕರೆದ ವ್ಯಕ್ತಿಯ ಜೊತೆಗೆ ನೂರ ಐವತ್ತು ಮಂದಿ ಗ್ರಾಮಸ್ಥರು ಕೂಡಾ ಬಂದಿದ್ದಾರೆ. ಲೈಸೆನ್ಸ್ ಇರುವ ಮತ್ತು ಗಣಿಗಾರಿಕೆ ಅಧಿಕಾರಿಗಳು ಕೂಡಲೇ ಇಲ್ಲಿಗೆ ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು. ಪರವಾನಿಗೆ ಪಡೆದ ವ್ಯಕ್ತಿ ಠಾಣೆಗೆ ಆಗಮಿಸಿದಾಗ ವಾಗ್ವಾದ ನಡೆಯಿತು. ಸಾರ್ವಜನಿಕರಿಗೆ ಸಮಸ್ಯೆಯಾಗುವುದಾದರೆ ಇದನ್ನು ರದ್ದು ಪಡಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದರು.