ಶಬರಿಮಲೆ : ಹಿಂದೂಗಳ ಪವಿತ್ರ ಪುಣ್ಯದೇಗುಲಗಳಲ್ಲಿ ಶಬರಿಮಲೆ ಅಯ್ಯಪ್ಪ ಕ್ಷೇತ್ರವೂ ಒಂದು. ಇನ್ನು ಮಕರ ಸಂಕ್ರಮಣ ಕೂಡಾ ಸಮೀಪಿಸುತ್ತಿದೆ. ಈಗಾಗಲೇ ಅನೇಕ ಅಯ್ಯಪ್ಪ ಭಕ್ತರು ಮಾಲಾಧಾರಿಗಳಾಗಿ ವೃತವನ್ನು ಆಚರಿಸಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆ ಕೇರಳ ಪೊಲೀಸರಿಗೆ ಖಡಕ್ ಸೂಚನೆಯೊಂದು ಹೊರಡಿಸಲಾಗಿದೆ.
ಅಯ್ಯಪ್ಪ ಮಾಲಾಧಾರಿಗಳಿಗೆ ಕಾಠಿ ಎತ್ತುವಂತಿಲ್ಲ...!
ಶಬರಿಮಲೆಯಲ್ಲಿ ಸೇರುವ ಜನಸಂದಣಿಗೆ ಪ್ರತೀ ವರ್ಷ ಏನಾದರೊಂದು ಸಮಸ್ಯೆ ಆಗುತ್ತಲೇ ಇರುತ್ತದೆ. ಭಕ್ತರನ್ನು ನಿರ್ವಹಿಸುವುದೇ ಪೊಲೀಸರ ಮುಂದೆ ಒಂದು ದೊಡ್ಡ ಸವಾಲಾಗಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಬರಿಮಲೆಯ ಭಕ್ತರ ಜೊತೆ ಪೊಲೀಸರು ನೀಚವಾಗಿ ವರ್ತಿಸಬಾರದು. ಸುಖಾಸುಮ್ಮನೆ ಲಾಠಿ ತೆಗೆದು ಹೊಡೆಯಬಾರದು. ಅಷ್ಟೇ ಅಲ್ಲದೆ ಅವರನ್ನು ಗೌರವದಿಂದ ಸ್ವಾಮಿ ಎಂದೇ ಸಂಭೋಧಿಸಬೇಕು. ಜನಸಂದಣಿ ನಿಯಂತ್ರಿಸಲು ಕೂಡಾ ಲಾಠಿ ಬಳಕೆಯಾಗಬಾರದು ಎಂದು ಶಬರಿಮಲೆ ಕ್ಷೇತ್ರದ ವಿಶೇಷ ಅಧಿಕಾರಿ ಎಸ್ಪಿ ಕೆ.ಇ ಬೈಜು ಹೊಸದಾಗಿ ಶಬರಿಮಲೆ ಕರ್ತವ್ಯದ ಜವಾಬ್ದಾರಿ ವಹಿಸಿಕೊಳ್ಳುವ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕರ್ತವ್ಯನಿರತ ಪೊಲೀಸರಿಗೆ ಇರುವ ನಿಯಮವೇನು..?
ತಮ್ಮ ಡ್ಯೂಟಿಯ ಸಂದರ್ಭ ಪೊಲೀಸರು ಸೋಷಿಯಲ್ ಮೀಡಿಯಾ ನೋಡಿಕೊಂಡು ಮೊಬೈಲ್ ಬಳಸುವಂತಿಲ್ಲ. ಜನಸಂದಣಿಯಲ್ಲಿ ಸಂಘರ್ಷ ಉಂಟಾಗದಂತೆ ನೋಡಿಕೊಳ್ಳಬೇಕು. ಅಷ್ಟೇ ಅಲ್ಲದೆ ಸ್ವಯಂ ನಿಯಂತ್ರಣ ಕಳೆದುಕೊಳ್ಳದೆ ಆಕ್ರೋಶ ಹೊರಹಾಕುವಂತಿಲ್ಲ. ಸಿಸಿ ಕ್ಯಾಮೆರಾದ ಮುಖೇನ ಪೊಲೀಸರ ಮೇಲೆ ಕೂಡಾ ನಿಗಾ ವಹಿಸಲಾಗುತ್ತದೆ.