ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಇಂದು ಲಕ್ಷದೀಪೋತ್ಸವ ಸಂಭ್ರಮ....????????

  • 01 Dec 2024 02:32:39 PM


ಸುಬ್ರಹ್ಮಣ್ಯ : ದ.ಕ ಜಿಲ್ಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ವಿಶೇಷವಾದ ಮಾನ್ಯತೆಯಿದೆ. ಕೇವಲ ಈ ಜಿಲ್ಲೆಯವರು ಮಾತ್ರವಲ್ಲದೆ ಇಲ್ಲಿಗೆ ಬೇರೆ ಬೇರೆ ರಾಜ್ಯ, ದೇಶಗಳಿಂದ ಭಕ್ತರು ಆಗಮಿಸುತ್ತಿರುತ್ತಾರೆ. ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ಮುಖಂಡರು ಕೂಡಾ ಆಗಾಗ ಈ ದೇಗುಲಕ್ಕೆ ಭೇಟಿ ನೀಡಿ ವಿಶೇಷವಾದ ಪೂಜೆಯನ್ನು ಸಲ್ಲಿಸುತ್ತಿರುತ್ತಾರೆ. ಇದೀಗ ಶ್ರೀ ಕ್ಷೇತ್ರದಲ್ಲಿ ಚಂಪಾಷಷ್ಠಿ ಸಮೀಪಿಸುತ್ತಿದೆ. ಇದಕ್ಕೆ ಸಕಲ ಸಿದ್ಧತೆಗಳು ಕೂಡಾ ಸರಾಗವಾಗಿ ನಡೆಯುತ್ತಿದೆ. ಈ ಮಧ್ಯೆ ಇಂದು ಕುಕ್ಕೆಯಲ್ಲಿ ಲಕ್ಷದೀಪೋತ್ಸವ ಅದ್ಧೂರಿಯಾಗಿ ನಡೆಯಲಿದೆ. 

 

ಅದ್ಧೂರಿಯಾಗಿ ನಡೆಯಲಿದೆ ಲಕ್ಷದೀಪೋತ್ಸವ...!!

 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಇಂದು ಲಕ್ಷದೀಪೋತ್ಸವ ಬಹಳ ಅದ್ಧೂರಿಯಾಗಿ ಜರುಗಲಿದೆ. ಈ ಪ್ರಯುಕ್ತ ಸುಬ್ರಹ್ಮಣ್ಯ ದೇವರ ಚಂದ್ರ ಮಂಡಲ ರಥೋತ್ಸವ ಕೂಡಾ ನಡೆಯಲಿದೆ. ಈ ಸಂದರ್ಭ ದೇಗುಲ ಸಂಪೂರ್ಣವಾಗಿ ದೀಪಗಳಿಂದ ಕಂಗೊಳಿಸಲಿವೆ. ಗೋಪುರದ ಬಳಿಯಿಂದ ಕಾಶಿಕಟ್ಟೆ ತನಕ ಹಾಗೂ ಆದಿ ಸುಬ್ರಹ್ಮಣ್ಯ ದೇಗುಲ ಪರಿಸರದಲ್ಲಿ ಲಕ್ಷ ದೀಪಗಳು ಪ್ರಜ್ವಲಿಸಲಿದ್ದು ಭಕ್ತರು ಕಣ್ತುಂಬಿಸಿಕೊಳ್ಳಲಿದ್ದಾರೆ. ಜತೆಗೆ ವಿಶೇಷವಾಗಿ ಸುಮಾರು 120 ತಂಡಗಳಿಂದ ಅಖಂಡ ಕುಣಿತ ಭಜನೆ ಸೇವೆ ನೆರವೇರಲಿದೆ.

ಸಂಜೆ 6ರಿಂದ ರಾತ್ರಿ 8ರ ತನಕ ರಥೋತ್ಸವದ ಮೊದಲು ನಡೆದು ನಂತರ ಭಜಕರಿಂದ ಕುಣಿತ ಭಜನೆ ನಡೆಯಲಿದೆ. ಮುಖ್ಯ ಗುರು ಮತ್ತು ಗಾಯಕ ಕಾರ್ಕಳದ ಯೋಗೀಶ್‌ ಕಿಣಿ ಅವರ ಗಾಯನಕ್ಕೆ ಭಜನೆ ತಂಡಗಳು ಹೆಜ್ಜೆ ಹಾಕಲಿವೆ. ಕಾಶಿಕಟ್ಟೆಗೆ ಆಗಮಿಸುವ ದೇವರಿಗೆ ಮಹಾಗಣಪತಿ ಸನ್ನಿಧಾನದಲ್ಲಿ ಗುರ್ಜಿ ಪೂಜೆ ನಡೆಯಲಿದೆ.

 

ದೇಗುಲದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ...

 

ಭಕ್ತರು ವರ್ಷಂಪ್ರತಿ ಇಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸುವುದು ಸಾಮಾನ್ಯ. ಸ್ವಯಂಪ್ರೇರಿತರಾಗಿ ನೆರವೇರಿಸುವ ಬೀದಿ ಉರುಳುಸೇವೆ ನೆರವೇರಿಸಲು ಅಗತ್ಯವಿರುವ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಂದು ಸಂಘ ಸಂಸ್ಥೆಗಳ ಸಹಕಾರದಿಂದ ಕುಮಾರಧಾರದಿಂದ ರಾಜಗೋಪುರದ ತನಕ ರಸ್ತೆಯನ್ನು ಗುಡಿಸಿ ಬೃಹತ್‌ ಸ್ವಚ್ಛತಾ ಸೇವೆ ನಡೆಸಲಾಗುವುದು. ಸಂಜೆ ನೀರು ಹಾಯಸಿ ರಸ್ತೆಯನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ನೀರುಹಾಯಿಸಿ ರಸ್ತೆಯ ಧೂಳನ್ನು ತೆರವುಗೊಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಆಡಳಿತಾಧಿಕಾರಿ ಹೇಳಿದ್ದಾರೆ. ಇದರ ಜೊತೆಗೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಕೂಡಾ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಸ್ವಚ್ಛತೆಯನ್ನು ಕಾಪಾಡಿ ದೇಗುಲದ ಪಾವಿತ್ರ್ಯತೆಯನ್ನು ಕಾಪಾಡುವಂತೆ ಆಡಳಿತ ಮಂಡಳಿ ಮನವಿಯನ್ನು ಕೂಡಾ ಮಾಡಿಕೊಂಡಿದೆ.