ಅಯೋಧ್ಯೆಯಲ್ಲಿ ಕಪಿಗಳಿಗಾಗಿ ಮಿಡಿದ ನಟ ಅಕ್ಷಯ್ ಕುಮಾರ್ ಹೃದಯ...!! ವರ್ಷಕ್ಕೆ ೧ ಕೋಟಿ ದೇಣಿಗೆ...!?

  • 01 Dec 2024 02:37:24 PM


ಅಯೋಧ್ಯಾ: ಅಯೋಧ್ಯೆಯಲ್ಲಿ ಶ್ರೀರಾಮದೇಗುಲ ನಿರ್ಮಾಣ ಅದೆಷ್ಟೋ ಸಾವಿರ ವರ್ಷದ ಹಿಂದೂಗಳ ಕನಸು. ಈಗಾಗಲೇ ಆ ಕನಸು ಸಂಪೂರ್ಣವಾಗಿ ಸಾಕಾರಗೊಂಡಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕೂಡಾ ಇತ್ತೀಚೆಗೆ ಬಹಳ ಅದ್ಧೂರಿಯಾಗಿ ಜರಗಿತ್ತು. ಲಕ್ಷ ಸಂಖ್ಯೆಯಲ್ಲಿ ಹಿಂದೂಗಳು ಭಾಗಿಯಾಗಿದ್ದರು. ಈ ರಾಮಮಂದಿರ ನಿರ್ಮಾಣಕ್ಕೆ ಅದೆಷ್ಟೋ ಸುಮನಸ್ಕ ಹಿಂದೂ ಬಾಂಧವರು ದೇಣಿಗೆಯನ್ನು ಕೂಡಾ ನೀಡಿದ್ದಾರೆ. ಇದೀಗ ಮತ್ತೊಂದು ಅಚ್ಚರಿಕರ ವಿಚಾರ ಬೆಳಕಿಗೆ ಬಂದಿದೆ. 

 

ಕೋತಿಗಳಿಗಾಗಿ ಕೋಟಿ ರೂ. ದೇಣಿಗೆ ನೀಡುತ್ತಿದ್ದಾರೆ ನಟ ಅಕ್ಷಯ್ ಕುಮಾರ್...!!

 

ಹಿಂದೂ ಧರ್ಮದಲ್ಲಿ ನಾವು ಕೋತಿಯನ್ನು ಕೂಡಾ ಹನುಮನಿಗೆ ಹೋಲಿಸಿ ಆರಾಧಿಸುತ್ತೇವೆ. ಹಾಗೆಯೇ ಭಗವಾನ್ ರಾಮಮಂದಿರ ಅಯೋಧ್ಯೆಯಲ್ಲಿ ಇದೀಗ ವಾನರ ಸೇನೆಯ ಓಡಾಟ ಹೆಚ್ಚಾಗಿದೆ. ಬರುವ ಭಕ್ತಾದಿಗಳು ಅದಕ್ಕೆ ಹಣ್ಣು ಹಂಪಲು ನೀಡುತ್ತಿರುತ್ತಾರೆ. ಒಳ್ಳೆಯ ಸಂಗತಿಯೆಂದರೆ ಈ ಕಪಿಗಳ ಸೇನೆಯ ಬಗ್ಗೆ ನಟ ಅಕ್ಷಯ್ ಕುಮಾರ್ ಅವರು ಕೂಡಾ ಮಾನವೀಯತೆ ತೋರಿಸಿದ್ದಾರೆ. ಹೌದು. ಅವರು ಕೋತಿಗಳ ಆಹಾರಕ್ಕಾಗಿ ವರ್ಷಕ್ಕೆ ಒಂದು ಕೋಟಿ ರೂ. ಯನ್ನು ತಮ್ಮ ತಂದೆ ಅರುಣ್ ಭಾಟಿಯಾ ಮತ್ತು ತನ್ನ ಮಾವ ರಾಜೇಶ್ ಖನ್ನಾ ಅವರ ಹೆಸರಿನಲ್ಲಿ ನೀಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.

 

ಪ್ರಾಣಿಗಳಿಗೆ ಆಹಾರ ನೀಡುವುದು ಪುಣ್ಯದ ಕೆಲಸ- ನಟ ಅಕ್ಷಯ್ ಕುಮಾರ್

 

ನಟ ಅಕ್ಷಯ್ ಕುಮಾರ್ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಲೇ ಬಂದಿದ್ದಾರೆ. ಇದೀಗ ಪ್ರಾಣಿಗಳಿಗೂ ಅವರು ಏನಾದರೊಂದು ಒಳ್ಳೆಯದು ಮಾಡಬೇಕು ಎಂಬ ಉತ್ತಮ ಉದ್ದೇಶವನ್ನು ಹೊಂದಿದ್ದಾರೆ. ಅವರು ನೀಡುವ ದೇಣಿಗೆಯಲ್ಲಿ ಕೋತಿಗಳ ಜೊತೆಗೆ ಇತರ ಪ್ರಾಣಿಗಳಿಗೂ ಕೂಡಾ ಆಹಾರ ನೀಡಬೇಕು ಎಂದು ಹೇಳುತ್ತಿರುತ್ತಾರೆ. ಅದರಂತೆ ಅಯೋಧ್ಯೆಯ ರಾಮಲಾಲ್ ಸದನದಿಂದ ಇದು ಆರಂಭವಾಗಿದ್ದು ನಿತ್ಯವೂ ಇಬ್ಬರು ಸಿಬ್ಬಂದಿ ಪಿಕಪ್ ವಾಹನದಲ್ಲಿ ಬೇಳೆ ಮತ್ತು ಹಣ್ಣುಗಳೊಂದಿಗೆ ತೆಗೆದುಕೊಂಡು ಹೊರಗೆ ಹೋಗಿ ಕೋತಿಗಳಿಗೆ ಆಹಾರವನ್ನು ನೀಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಪ್ರತಿದಿನವೂ ವಾನರ ಸೇನೆಗೆ ಅಕ್ಷಯ್ ಕೊಟ್ಟ ಹಣದಲ್ಲಿ ಆಹಾರಗಳನ್ನು ನೀಡಲಾಗ್ತಿದೆ. ಇದರಿಂದ ಅವುಗಳ ಹೊಟ್ಟೆ ತುಂಬುತ್ತಿದೆ. ಅತ್ಯಂತ ಖುಷಿಯಾಗುತ್ತದೆ. ಈ ರೀತಿ ಪ್ರಾಣಿಗಳ ಪಾಲಿಗೆ ಆಹಾರ ನೀಡಿ ದೇವರಾಗೋದು ಪುಣ್ಯದ ಕೆಲಸ ಎನ್ನುತ್ತಾರೆ ನಟ ಅಕ್ಷಯ್ ಕುಮಾರ್.