ರಾಮನಗರ: ಇಂದು ಜಗತ್ತು ಬದಲಾಗಿದೆ. ಸಂಬಂಧಗಳು ವ್ಯವಹಾರ ಆಗಿಬಿಟ್ಟಿವೆ. ಮನುಷ್ಯನ ಮಾನವೀಯ ಗುಣಗಳು ಸತ್ತು ಹೋಗಿವೆ. ಸಮಾಜದಲ್ಲಿ ಕ್ರೌರ್ಯ, ದಬ್ಬಾಳಿಕೆಯೇ ಆಡಂಬರದಿಂದ ಮೆರೆಯುತ್ತಿದೆ. ಅದೇನೇ ಬದಲಾಗಲಿ, ಹೆತ್ತ ತಾಯಿಯ ಪ್ರೀತಿಯೂ ಹಣದಾಹಕ್ಕೆ ಸೋಲುತ್ತೆ ಅಂದ್ರೆ ನಂಬ್ತೀರಾ..? ಈ ಸ್ಟೋರಿ ನೋಡಿದ್ರೆ ನೀವೂ ನಂಬೋದಂತೂ ಗ್ಯಾರಂಟಿ...
ಹಣದಾಸೆಗೆ ಹೆತ್ತ ಮಗುವನ್ನೇ ಮಾರಿದ ಪಾಪಿ ಹೆತ್ತಬ್ಬೆ...!!
#Mother Sells her Child for Money
ಹಣ ಅನ್ನೋದು ಎಂಥವರನ್ನೂ ಬದಲಾಯಿಸುತ್ತೆ ಎಂಬಯದಕ್ಕೆ ಈ ನೈಜ ಘಟನೆಯೇ ಜೀವಂತ ಸಾಕ್ಷಿ ನೋಡಿ. ಹಣದ ಆಸೆಗೆ ಬಿದ್ದ ತಾಯಿಯೋರ್ವಳು ತನ್ನ ಗಂಡನಿಗೂ ತಿಳಿಸದೇ ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈ ಸಂಬಂಧ ಪತ್ನಿಯ ವಿರುದ್ಧ ಪತಿಯೇ ದೂರು ನೀಡಿದ್ದು, ಪತ್ನಿ ಹಾಗೂ ಇತರೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೌದು. ರಾಮನಗರದ ಯಾರಬ್ ನಗರ ನಿವಾಸಿ ಸದ್ದಾಂ ಪಾಷಾ ಹಾಗೂ ನಸ್ರೀನ್ ತಾಜ್ ಕಳೆದ 6 ವರ್ಷಗಳ ಹಿಂದೆ ಮದುವೆ ಆಗಿದ್ದರು. ಅವಳಿ ಮಕ್ಕಳು ಸೇರಿ ಒಟ್ಟು 4 ಮಕ್ಕಳಿದ್ದು, ಕೂಲಿ ಕೆಲಸ ಮಾಡುತ್ತಿದ್ದ ಸದ್ದಾಂ ಬಡತನದಲ್ಲಿ ಜೀವನ ನಡೆಸುತ್ತಿದ್ದರು.
ಕಳೆದ 30 ದಿನಗಳ ಹಿಂದೆ ದಂಪತಿಗೆ ಗಂಡು ಮಗು ಜನಿಸಿತ್ತು. ಸದ್ದಾಂ ಕೆಲ ಕೈಸಾಲ ಕೂಡಾ ಮಾಡಿಕೊಂಡಿದ್ದ. ಹಿನ್ನೆಲೆ ಈ ಸಾಲ ತೀರಿಸುವ ಹಿನ್ನೆಲೆ ಕೊನೆಯ ಮಗುವನ್ನು ಮಾರಾಟ ಮಾಡುವಂತೆ ನಸ್ರೀನ್, ಸದ್ದಾಂಗೆ ಪೀಡಿಸುತ್ತಲೇ ಬಂದಿದ್ದಳು. ಆದರೆ, ಸದ್ದಾಂ ಪತ್ನಿಯ ಮಾತನ್ನು ತಿರಸ್ಕರಿಸಿದ್ದ. ಸಾಲ ತೀರಿಸುವ ಉದ್ದೇಶದಿಂದ ಹೆತ್ತ ಮಗುವನ್ನೇ ಮಾರಾಟ ಮಾಡೋದು ಅವನಿಗೆ ಸುತಾರಾಂ ಇಷ್ಟವಿರಲಿಲ್ಲ.
ಮಾತು ಕೇಳದ ಪತಿ ಮನೆಯಲ್ಲಿ ಇಲ್ಲದಿದ್ದಾಗ ನಡೀತು ನಸ್ರೀನ್ ನ ಮಾಸ್ಟರ್ ಪ್ಲ್ಯಾನ್...!!
ಡಿ.5ಕ್ಕೆ ಪತಿ ಕೆಲಸಕ್ಕೆ ಹೋಗಿದ್ದ ಸಮಯವನ್ನೇ ಸದುಪಯೋಗಪಡಿಸಿಕೊಂಡ ನಸ್ರೀನ್ ಸ್ಥಳೀಯವರಾಗಿದ್ದ ಅಸ್ಲಾಂ ಹಾಗೂ ಫಾಹಿಮಾ ಸಹಾಯದೊಂದಿಗೆ ಬೆಂಗಳೂರಿನ ನಿವಾಸಿ ತರ್ನಮ್ ಸುಲ್ತಾನ್ ಎಂಬವರಿಗೆ ತನ್ನದೇ ಒಡಲಲ್ಲಿ ಜನಿಸಿದ ಗಂಡು ಮಗುವನ್ನು 1.5 ಲಕ್ಷಕ್ಕೆ ಮಾರಾಟ ಮಾಡಿದ್ದಾಳೆ. ಇನ್ನು ಪತಿ ಸದ್ದಾಂ ಪಾಷಾ ಕೆಲಸ ಮುಗಿಸಿ ಮನೆಗೆ ಬಂದ ಸಂದರ್ಭದಲ್ಲಿ ಮಗು ಇಲ್ಲದಿದ್ದಾಗ ಈ ಬಗ್ಗೆ ಕುರಿತು ವಿಚಾರಿಸಿದ್ದಾನೆ.
ಈ ವೇಳೆ ನಸ್ರೀನ್ ಮಗುವಿಗೆ ಹುಷಾರಿಲ್ಲ ಸಂಬಂಧಿಕರು ಕರೆದುಕೊಂಡು ಹೋಗಿದ್ದು, ಬೆಳಗ್ಗೆ ವಾಪಸ್ ಬಿಡುತ್ತಾರೆ ಎಂದು ಸಮಜಾಯಿಷಿ ನೀಡಿದ್ಧಾಳೆ. ಪತ್ನಿಯ ಮಾತನ್ನು ನಂಬಿದ್ದ ಸದ್ದಾಂ ಪಾಷಾ ಊಟ ಮುಗಿಸಿ ಮಲಗಿದ್ದ. ಮಾರನೆಯ ದಿನವೂ ಮಗುವಿಗಾಗಿ ದಂಪತಿಯ ನಡುವೆ ಗಲಾಟೆಯಾಗಿದ್ದು, ಗಲಾಟೆ ಅತಿರೇಕಕ್ಕೇರಿ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭ ಸದ್ದಾಂ ತಲೆಗೆ ಪೆಟ್ಟು ಬಿದ್ದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಡಿ.7ರಂದು ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಸದ್ದಾಂ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ರಾಮನಗರ ಟೌನ್ ಪೊಲೀಸರು, ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ತಾಯಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಹಣದಾಸೆಗೆ ಮಗುವನ್ನೇ ಮಾರಾಟ ಮಾಡಲು ಹೆತ್ತ ತಾಯಿಯೇ ರೆಡಿಯಾಗಿರೋದು ಮಾತ್ರ ವಿಪರ್ಯಾಸ....!
#Ramnagar News