ರಾಮದುರ್ಗಾ: ಸಚಿವೆ ಲಕ್ಷ್ಮೀ ಹೆಬಾಳ್ಕರ್ ಅವರಿಗೆ ಅವ್ಯಾಚ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ನಿನ್ನೆ ಸುವರ್ಣ ಸೌಧದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಬಂಧಿಸಲಾಗಿದೆ.
ಆದರೆ ಬಂಧನವಾದ ಬಳಿಕ ರವಿ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸದೆ, ಆಸ್ಪತ್ರೆಗೂ ಕರೆದೊಯ್ಯದೆ ಪೊಲೀಸರು ಬೆಳಗ್ಗೆ 3 ಗಂಟೆಯ ವರೆಗೆ ಸುತ್ತಾಡಿಸಿದ್ದಾರೆ. ಈ ಬಗ್ಗೆ ಸಿ.ಟಿ ರವಿ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದು, ಈ ಬಗೆಗಿನ ವಿವರ ಇಲ್ಲಿದೆ.
ಸಿ.ಟಿ ರವಿ ಹೇಳಿದ್ದೇನು?
ಬಂಧನ ಹಾಗೂ ಪೊಲೀಸರ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಿ.ಟಿ ರವಿ, 'ನನ್ನ 35 ವರ್ಷದ ರಾಜಕೀಯ ಜೀವನದಲ್ಲಿ ಎಂದಿಗೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಪೊಲೀಸರಿಗೆ ಮೇಲಿಂದ ಮೇಲೆ ಪ್ರಭಾವಿಗಳ ಕರೆ ಬರುತ್ತಿದೆ.
ಮಾನಸಿಕವಾಗಿ ನನ್ನನ್ನು ಕುಗ್ಗಿಸಲು ಷಡ್ಯಂತ್ರಗಳು ನಡೆಯುತ್ತಿದೆ. ನಾನು ಸದನದಲ್ಲಿ ಏನು ಮಾತಾಡಿದ್ದೇನೆ ಎಂಬುದನ್ನು ಸಭಾಪತಿಗಳು ಕೇಳಬೇಕಿತ್ತು. ಸುವರ್ಣ ಸೌಧದಲ್ಲಿ ನನ್ನ ಮೇಲೆ ದಾಳಿ ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದಿದ್ದಾರೆ.
3 ಗಂಟೆಯವರೆಗೆ ರವಿ ಧರಣಿ!
ಬೆಳಗ್ಗೆ 3 ಗಂಟೆಯ ವರೆಗೆ ರಾಮದುರ್ಗ ಆಸ್ಪತ್ರೆಯ ಮುಂಬಾಗದಲ್ಲಿ ಧರಣಿ ಕುಳಿತು ಸಿಡಿಮಿಡಿಗೊಂಡ ಸಿ.ಟಿ ರವಿ, 'ಯಾಕಾಗಿ ನನ್ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸದೆ ಈ ರೀತಿ ಸುತ್ತಾಡಿಸುತ್ತಿದ್ದೀರಿ.
ಇದರ ಬದಲು ನನ್ನನ್ನು ಶೂಟ್ ಮಾಡಿ ಸಾಯಿಸಿ. ಎಲ್ಲಾ ಆರೋಪಗಳನ್ನು ಕೂಡ ಹೋರಾಟದ ಮೂಲಕ ಎದುರಿಸುತ್ತೇನೆ. ಈ ರೀತಿ ನಡೆಸಿಕೊಳ್ಳಲು ನಾನೇನು ಟೆರರಿಸ್ಟ್ ಅಲ್ಲ' ಎಂದು ಅಬ್ಬರಿಸಿದ್ದಾರೆ.