ಮಂಗಳೂರು: ರಾಜ್ಯಾದ್ಯಂತ ಹೊಸ ಸಂಚಲನ ಮೂಡಿಸಿದ್ದ ಮತ್ತು ಜನರನ್ನು ಭಯಭೀತರನ್ನಾಗಿಸಿದ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಸೆರೆಹಿಡಿದಿದ್ದಾರೆ. ಇದೀಗ ತನಿಖೆ ಮುಂದುವರೆಯುತ್ತಿದ್ದು ಅಚ್ಚರಿಕರ ಸಂಗತಿಗಳು ಬಯಲಾಗುತ್ತಲೇ ಇದೆ. ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿದ್ದು ಪೊಲೀಸರು ಹುಬ್ಬೇರಿಸುವಂತಾಗಿದೆ.
ದರೋಡೆಗೆ ಸ್ಕೆಚ್ ಹಾಕಿ ಕೊಟ್ಟಿದ್ದೇ ಆ ನಟೋರಿಯಸ್ ಸ್ಥಳೀಯ..!
ಬ್ಯಾಂಕ್ ದರೋಡೆಗೆ ಸ್ಥಳೀಯ ವ್ಯಕ್ತಿಯೋರ್ವನ ಸಂಪೂರ್ಣ ಬೆಂಬಲ ಇತ್ತು ಎಂಬ ಶಾಕಿಂಗ್ ಮಾಹಿತಿ ಬೆಳಕಿಗೆ ಬಂದಿದೆ. ಬ್ಯಾಂಕ್ನಲ್ಲಿ 18 ಕೋಟಿ ರೂಪಾಯಿ ಮೌಲ್ಯದಷ್ಟು ಚಿನ್ನಾಭರಣ ಇರುವ ಬಗ್ಗೆ ಸ್ಥಳೀಯ ವ್ಯಕ್ತಿಯೇ ಈ ನಟೋರಿಯಸ್ ಗ್ಯಾಂಗ್ಗೆ ನಿಖರವಾದ ಮಾಹಿತಿ ನೀಡಿದ್ದಾನೆ.
ಬ್ಯಾಂಕ್ನ ಸುತ್ತಮುತ್ತ ಮುಸ್ಲಿಮರೇ ಹೆಚ್ಚಾಗಿರೋದು ದರೋಡೆ ಮಾಡಲು ಸ್ವಲ್ಪ ತೊಡಕಾಗಿತ್ತು. ಅದಕ್ಕಾಗಿಯೇ ಆತ ಶುಕ್ರವಾರ ಮಧ್ಯಾಹ್ನ ಮುಸ್ಲಿಂ ಬಾಂಧವರು ನಮಾಜ್ ಗೆ ತೆರಳುವ ಸಮಯವನ್ನು ಸೂಚಿಸಿ ದರೋಡೆಗೆ ಪ್ರೇರೇಪಿಸಿದ್ದಾನೆ ಎಂದು ತನಿಖೆಯಲ್ಲಿ ಬಯಲಾಗಿದೆ. ಅಷ್ಟೇ ಅಲ್ಲದೆ ಬ್ಯಾಂಕ್ನಲ್ಲಿ ಮೂವರು ಮಹಿಳಾ ಸಿಬ್ಬಂದಿ ಇರುವ ಬಗ್ಗೆಯೂ ಆ ಸ್ಥಳೀಯನೇ ಈ ಗ್ಯಾಂಗ್ ಗೆ ಮಾಹಿತಿ ನೀಡಿದ್ದಾನೆ. ಬ್ಯಾಂಕ್ ನ ಹಣ, ಚಿನ್ನವನ್ನು ಲೂಟಿ ಹೊಡೆದು ಅವರು ಸ್ಥಳದಿಂದ ಎಸ್ಕೇಪ್ ಆಗಲು ಸ್ಥಳೀಯರೇ ರೂಟ್ಮ್ಯಾಪ್ ಹಾಕಿಕೊಟ್ಟಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾದದ್ದು ಹೇಗೆ ಮತ್ತು ಯಾಕೆ..? ಲೂಟಿ ಹೊಡೆದ ಹಣದಲ್ಲಿ ಅರ್ಧ ಭಾಗ ಇವರು ಪಡೆದುಕೊಳ್ಳುವ ಪ್ಲ್ಯಾನ್ ಇತ್ತಾ..? ಸ್ಥಳೀಯರು ಈ ದರೋಡೆಯಲ್ಲಿ ಪಾತ್ರ ವಹಿಸಿದ್ದು ಯಾಕೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಪೊಲೀಸರು ತನಿಖೆಯಲ್ಲಿ ಕೆದಕುತ್ತಿದ್ದಾರೆ. ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಪೊಲೀಸರು ಇನ್ನು ಎರಡು ದಿನದಲ್ಲಿ ಆ ಮಾಸ್ಟರ್ ಮೈಂಡ್ ಸ್ಥಳೀಯರು ಯಾರು ಎನ್ನುವುದನ್ನು ಪತ್ತೆ ಹಚ್ಚಿ ಅವರನ್ನೂ ಅರೆಸ್ಟ್ ಮಾಡಲಿದ್ದಾರೆ.
ಚಿನ್ನ ಕದ್ದೊಯ್ಯುವ ವೇಳೆ ಕಾರು ಚಲಾಯಿಸಿದ್ದು ಯಾರು..?
ದರೋಡೆಕೋರರು ಚಿನ್ನ, ಹಣವನ್ನು ಕದ್ದೊಯ್ದು ಸುಮಾರು ಏಳುನೂರು ಕಿ.ಮೀ ನಷ್ಟು ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ.
ಚಿನ್ನ ಕದ್ದೊಯ್ಯುವ ವೇಳೆ ಕಾರು ಚಲಾಯಿಸಿದ್ದ ಆರೋಪಿ ಮುರುಗಂಡಿ ದೇವರ್ ಮುಂಬೈ ಹಾಗೂ ತಮಿಳುನಾಡು ಮೂಲದ ನಟೋರಿಯಸ್ ಗ್ಯಾಂಗ್ನವನಾಗಿದ್ದ. ತಿರುನಲ್ವೇಲಿ ತನಕ ಆತ ಕಾರು ಡ್ರೈವಿಂಗ್ ಮಾಡಿಕೊಂಡು ಹೋಗಿದ್ದ. ಈ ದರೋಡೆಗೆ ಎರಡು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದ ಈ ಗ್ಯಾಂಗ್ ನಲ್ಲಿ ಒಬ್ಬಾತನಾಗಿದ್ದ ಮುರುಗಂಡಿ 2 ತಿಂಗಳ ಹಿಂದೆಯೇ ಮಂಗಳೂರಿಗೆ ಬಂದಿದ್ದ.
ಕೋಟೆಕಾರು ಬ್ಯಾಂಕ್ ಪರಿಸರದಲ್ಲಿ ಸಾಮಾನ್ಯ ಮನುಷ್ಯನಂತೆ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ನಿಖರವಾದ ಸ್ಕೆಚ್ ತಯಾರಿಸಿ ಮತ್ತೆ ತಮಿಳುನಾಡು ತೆರಳಿದ್ದ. ಆ ಬಳಿಕ ದರೋಡೆಗೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ತಂಡದ ಜೊತೆ ಬಂದಿದ್ದಾನೆ. ರಾಜೇಂದ್ರನ್, ಕಣ್ಣನ್ ಮಣಿ ಹಾಗೂ ಇತರೆ 6 ಜನರ ಜೊತೆಗೆ ರಾಜ್ಯಕ್ಕೆ ಬಂದಿದ್ದಾನೆ. ಆದರೆ ದರೋಡೆ ಮಾಡುವಾಗ ಐವರನ್ನು ಮಾತ್ರ ಜೊತೆಗೆ ಸೇರಿಸಿಕೊಂಡಿದ್ದಾನೆ.
ಓರ್ವ ಮಾತ್ರ ಬೇರೆ ಜಾಗರದಲ್ಲಿ ನಿಂತು ದರೋಡೆಗೆ ಸಹಾಯ ಮಾಡಿದ್ದಾನೆ ಅನ್ನೋ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇನ್ನೂ ಪೊಲೀಸರ ತನಿಖೆಯಲ್ಲಿ ಭಯಾನಕ ವಿಚಾರಗಳು ಬಯಲಾಗಲಿದೆ. ಇದೀಗ ಪೊಲೀಸರು ಇವರಿಗೆ ಬೆಂಬಲ ನೀಡಿದ ಸ್ಥಳೀಯರನ್ನು ಪತ್ತೆ ಹಚ್ಚುವಲ್ಲಿ ಅಲರ್ಟ್ ಆಗಿ ಕಾರ್ಯಾಚರಿಸುತ್ತಿದ್ದಾರೆ.