ದೆಹಲಿ ವಿಧಾನಸಭಾ ಚುನಾವಣೆ ಪರವಾಗಿ ಬಿಜೆಪಿ ಪರ ಬಿರುಸಿನ ಪ್ರಚಾರ ನಡೆಸಿದ ದ.ಕ ಸಂಸದ ಬ್ರಿಜೇಶ್ ಚೌಟ!

  • 03 Feb 2025 08:23:32 PM

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಪರವಾಗಿ ಪ್ರಚಾರಕ್ಕಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಹ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಹಲವು ಕಡೆ ಬಿರುಸಿನ ಪ್ರಚಾರವನ್ನು ನಡೆಸಿದ್ದಾರೆ.

 

ಬಜೆಟ್ ಅಧಿವೇಶನದ ನಿಮಿತ್ತ ದೆಹಲಿಗೆ ತೆರಳಿರುವ ಕ್ಯಾ. ಚೌಟ ಅವರು,ಕಸ್ತೂರ್ಬಾ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನೀರಜ್ ಬಸೋಯಾ ಪರವಾಗಿ ಇಲ್ಲಿನ ಸತ್ಯ ಜೀವನ ಲೆಪ್ರಸಿ ಸೊಸೈಟಿಯಲ್ಲಿ, ಹರಿ ನಗರ ಅಭ್ಯರ್ಥಿ ಶ್ಯಾಮ್ ಶರ್ಮಾ ಪರವಾಗಿ ಸುಭಾಷ್ ನಗರದಲ್ಲಿರುವ ಆಟೋ ಮಾರ್ಕೆಟ್, ತಿಹಾರ್ ಗ್ರಾಮ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಕರ್ತರೊಂದಿಗೆ ಮನೆ-ಮನೆ ಪ್ರಚಾರ ನಡೆಸಿ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತ ಯಾಚನೆ ಮಾಡಿದ್ದಾರೆ. ತಿಹಾರ್ ಗ್ರಾಮದ ಪ್ರಚಾರದ ವೇಳೆ ರಾಜ್ಯಸಭಾ ಸದಸ್ಯರಾದ ಇಂದು ಗೋಸ್ವಾಮಿ ಜೊತೆಗೂಡಿ ಸಂಸದ. ಕ್ಯಾ ಚೌಟ ಬಿರುಸಿನ ಪ್ರಚಾರ ಮಾಡಿದ್ದಾರೆ.

 

ಈ ಬಾರಿ ಹರಿನಗರ ಮತ್ತು ಕಸ್ತೂರ್ಬಾ ನಗರ ಕ್ಷೇತ್ರಗಳ ಪ್ರಚಾರದ ಜವಾಬ್ದಾರಿಯನ್ನು ಕ್ಯಾ. ಚೌಟ ಅವರಿಗೆ ನೀಡಲಾಗಿದ್ದು ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ಎರಡು ದಿನ ಉಳಿದಿರುವ ಹಿನ್ನೆಲೆಯಲ್ಲಿ, ರಾಜಧಾನಿಯಲ್ಲಿ ಬಿಜೆಪಿ ಪರ ಮತದಾರರಿಂದ ಒಳ್ಳೆಯ ಬೆಂಬಲ ವ್ಯಕ್ತವಾಗುತ್ತಿದೆ.

 

ಪ್ರಧಾನಿ ನರೇಂದ್ರ ಮೋದಿಯ ಜನ ಕಲ್ಯಾಣ ಕಾರ್ಯಕ್ರಮಗಳ ಪ್ರಭಾವದಿಂದ ಈ ಹಿಂದೆ ನಡೆದ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಕಂಡಿದೆ. ದೆಹಲಿಯಲ್ಲೂ ಅದೇ ಸಾಧನೆಯ ನಿರೀಕ್ಷೆ ಇದೆ ಎಂದು ಕ್ಯಾ. ಚೌಟ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.