ಕಾಸರಗೋಡು: ಪೈವಳಿಕೆಯಲ್ಲಿ ಒಂದು ತಿಂಗಳ ಹಿಂದೆ ಕಾಣೆಯಾಗಿದ್ದ 15 ವರ್ಷದ ಹುಡುಗಿ ಶ್ರೇಯಾ ಮತ್ತು 42 ವರ್ಷದ ವ್ಯಕ್ತಿಯನ್ನು ಅವರ ಮನೆಯ ಸಮೀಪದ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿದೆ.
ಭಾನುವಾರ ಬೆಳಿಗ್ಗೆ ಪೊಲೀಸರ ಮತ್ತು ಸ್ಥಳೀಯರ ಸಂಯುಕ್ತ ಹುಡುಕಾಟದ ಸಂದರ್ಭದಲ್ಲಿ ಶ್ರೇಯಾ ಮತ್ತು ಅವರ ಮನೆಯ 500 ಮೀಟರ್ ದೂರದಲ್ಲಿ ಇರುವ ಆಟೋ ಡ್ರೈವರ್ ಆದ ಪ್ರದೀಪ್ ಅವರನ್ನು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಹಿಡಿಯಲಾಯಿತು.
ಘಟನೆಯ ನಡೆದ ಸ್ಥಳದಲ್ಲಿ ಎರಡು ಮೊಬೈಲ್ ಫೋನ್ಗಳು ಮತ್ತು ಒಂದು ಚೂರಿ ಸಿಕ್ಕಿದೆ. ಇಬ್ಬರೂ ಪ್ಲಾಸ್ಟಿಕ್ ಬಳ್ಳಿಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.
ಫೆಬ್ರವರಿ 11 ರ ರಾತ್ರಿ ಮಲಗಲು ಹೋದ ಶ್ರೇಯಾ ಕಾಣೆಯಾಗಿರುವುದನ್ನು ಮಾರನೇ ದಿನ ಬೆಳಿಗ್ಗೆ ಮನೆಯವರು ಗಮನಿಸಿದ್ದರು. ಹತ್ತಿರದ ಪೋಲಿಸ್ ಇಲಾಖೆಗೆ ದೂರು ನೀಡಿದ್ದರು.
ಮಂಡೇಕಾಪ್ಪಿನಲ್ಲಿ ಬೆಳಿಗ್ಗೆ ಪ್ರಾರಂಭವಾದ ಹುಡುಕಾಟದಲ್ಲಿ ಏಳು ಪೊಲೀಸ್ ಠಾಣೆಗಳಿಂದ ಅಧಿಕಾರಿಗಳು ಹಾಗೂ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ಮತ್ತು ಕುಂಬಳ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಅವರ ನೇತೃತ್ವದಲ್ಲಿ ಈ ಹುಡುಕಾಟ ನಡೆಸಲಾಯಿತು.