ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿರಿಯ ಬೀಚ್ ರಸ್ತೆ ಬದಿಯ ಬೃಹತ್ ಮರಗಳು ಇಲ್ಲಿ ಕಾರ್ಯಾಚರಿಸುತ್ತಿರುವ ಅಂಗನವಾಡಿ ಹಾಗೂ ಮದ್ರಾಸಕ್ಕೆ ಅಪಾಯಕಾರಿಯಾಗಿ ಮಾರ್ಪಾಡುಗೊಂಡಿದೆ.
ಹಲವು ಭಾರಿ ಅಧಿಕಾರಿಗಳಿಗೆ ದೂರು ನೀಡಿದರೂ ತೆರವುಗೊಳಿಸುವ ಗಡು ಮಾತ್ರವೇ ನೀಡುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.
ಈ ಬೃಹತ್ ಮರದ ರೆಂಬೆಗಳು ಅಡ್ಡಾದಿಡ್ಡಿಯಾಗಿ ಬೆಳೆದು ಅಪಾಯದಂಚಿನಲ್ಲಿದೆ. ಕಳೆದ ಶನಿವಾರ ಮುಂಜಾನೆ ಭಾರೀ ಗಾಳಿ, ಮಳೆಗೆ ಬೃಹತ್ ರೆಂಬೆ ಕಟ್ಟಡದ ಮೇಲೆ ಬಿದ್ದು ಬಾಗಿಲು, ನೀರಿನ ಟ್ಯಾಂಕ್, ಆವರಣಗೋಡೆ ಹಾನಿಗೊಂಡಿದೆ.
ಇಲ್ಲಿ ಕಾರ್ಯಾಚರಿಸುತ್ತಿರುವ ಅಂಗನವಾಡಿ ಹಾಗೂ ಮದ್ರಾಸಕ್ಕೆ ತಲುಪುವ ಮಕ್ಕಳಲ್ಲಿ ಭಯದ ವಾತಾವರಣ ಉಂಟಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ.
ಅಂಗನವಾಡಿ ಕಾಂಕ್ರೀಟ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು ಎದುರು ಭಾಗಕ್ಕೆ ತಗಡ್ ಶೀಟನ್ನು ಹೊದಿಸಲಾಗಿದೆ. ಇದೇ ಪರಿಸರದಲ್ಲಿ ಮದ್ರಸ ಕೂಡಾ ಕಾರ್ಯಾಚರಿಸುತ್ತಿದ್ದು ಈ ಮರದಿಂದ ಅಪಾಯಕ್ಕೆ ಕಾರಣವಾಗಿದೆ. ಮರದ ಒಣಗಿದ ತು೦ಡುಗಳು ಪದೇ ಪದೇ ಕಟ್ಟಡದ ಮೇಲೆ ಬೀಳುತ್ತಿರುವುದು ಆತಂಕ ಉಂಟುಮಾಡಿದೆ.
ಮಳೆಗೆ ಯಾವುದೆ ಕ್ಷಣದಲ್ಲಿ ಮರಗಳು ಮುರಿದು ಬೀಳುವ ಆತಂಕ ಸ್ಥಳೀಯರನ್ನು ಕಾಡಿದೆ. ಅಲ್ಲದೆ ಇದೇ ಪರಿಸರದಲ್ಲಿ ಟ್ರಾನ್ಸ್ ಫಾರ್ಮರ್ ಕೂಡಾ ಇರುವುದು ಅಪಾಯ ಕೈಬೀಸಿ ಕರೆಯುತಿದೆ. ಅಪಾಯಕ್ಕೆ ಕಾರಣವಾದ ಮರದ ರೆಂಬೆಗಳನ್ನು ತೆರವುಗೊಳಿಸಬೇಕೆಂದು ವರ್ಷಗಳ ಹಿಂದೆ ಊರವರು ಜಿಲ್ಲಾಧಿಕಾರಿ, ಮಂಗಲ್ಪಾಡಿ ಪಂಚಾಯತ್ ಸಹಿತ ವಿವಿಧ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದು, ಇದುವರೆಗೂ ಯಾವುದೆ ಕ್ರಮಕ್ಕೆ ಮುಂದಾಗಲಿಲ್ಲವೆಂದು ಊರವರು ತಿಳಿಸಿದ್ದಾರೆ.
ಅಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು ತಲುಪಿ ಮರವನ್ನು ತಪಾಸಣೆ ಹಾಗೂ ಅಳತೆ ಮಾಡಿ ಶೀಘ್ರ ತೆರವುಗೊಳಿಸುವುದಾಗಿ ತಿಳಿಸಿ ಹೋದವರು ಮರಳಿ ಬರಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸಂಬಂಧಪಟ್ಟ ಅಧಿಕಾರಿಗಳ ವರ್ಗ ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ