ಬ್ರಹ್ಮಾವರ : ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿರುತ್ತದೆ. ಇದರ ಹಿನ್ನೆಲೆಯಲ್ಲಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಬೆಂಗಳೂರಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಪ್ರಾದೇಶಿಕ ಅಧಿಕಾರಿ ವಿ.ಪಿ. ಬ್ರಹ್ಮಾಕರ್ ಅವರನ್ನು ಭೇಟಿ ಮಾಡಿ, ರಸ್ತೆಯ ಸುರಕ್ಷತೆ ಮತ್ತು ಮೂಲಸೌಕರ್ಯದ ಕುರಿತಾಗಿ ಗಂಭೀರ ಚರ್ಚೆ ನಡೆಸಿದರು.
ಇತ್ತೀಚೆಗಷ್ಟೆ ಬ್ರಹ್ಮಾವರದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬರ ಸಾವಿಗೆ ಕಾರಣವಾದ ಅಪಘಾತದ ನಂತರ ಸಾರ್ವಜನಿಕ ಆಕ್ರೋಶ ಹೆಚ್ಚಗಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ತೀವ್ರವಾಗಿದೆ.
ಈ ಹಿಂದೆ ಭದ್ರಗಿರಿ-ಉಪ್ಪಿನಕೋಟೆ ನಡುವೆ ಸೇವಾ ರಸ್ತೆ ನಿರ್ಮಾಣದ ಭರವಸೆ ನೀಡಲಾಗಿದ್ದರೂ ಕಾಮಗಾರಿ ಇನ್ನೂ ಪ್ರಾರಂಭವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವನ್ನುಂಟು ಮಾಡಿದೆ.
ಸಭೆಯಲ್ಲಿ ಸಂಸದ ಕೋಟ ಅವರು ಯೋಜನೆಗಳ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅವರು ಬ್ರಹ್ಮಾವರ ಮೇಲ್ಸೇತುವೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯನ್ನು ತಕ್ಷಣ ಕೇಂದ್ರಕ್ಕೆ ಸಲ್ಲಿಸಲು ಒತ್ತಾಯಿಸಿದರು.
ಹೆಜಮಾಡಿ-ಕುಂದಾಪುರ ನಡುವೆ 42 ಕಿ.ಮೀ. ಹೊಸ ಸೇವಾ ರಸ್ತೆಗಳ ಅಗತ್ಯವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಾದೇಶಿಕ ಅಧಿಕಾರಿ ಬ್ರಹ್ಮಕರ್ ಅವರು ಸಂಸದರ ಬೇಡಿಕೆಗಳಿಗೆ ಸ್ಪಂದಿಸುತ್ತಾ, ಸತತ ವಿಳಂಬವಿಲ್ಲದೆ ಸೇವಾ ರಸ್ತೆ ಕಾಮಗಾರಿಗಳನ್ನು ಆರಂಭಿಸುವ ಭರವಸೆ ನೀಡಿದ್ದಾರೆ.
ಮೇಲ್ಸೇತುವೆ ಹಾಗೂ ಸೇವಾ ರಸ್ತೆಗಳ ಡಿಪಿಆರ್ ಒಂದು ವಾರದೊಳಗೆ ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರೂ ಭಾಗವಹಿಸಿ, ಸಂಸದ ಕೋಟ ಅವರ ಸಲಹೆಗಳಿಗೆ ಬೆಂಬಲ ನೀಡಿದ್ದಾರೆ.