ಮಂಗಳೂರು: ಮಂಗಳೂರು ನಗರದ ಕ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಮಹಿಳಾ ಪ್ರಯಾಣಿಕೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಗುತ್ತಿಗೆ ಆಧಾರದ ಮೇಲೆ ಕೆಲಸಮಾಡುತ್ತಿದ್ದ ಕಂಡಕ್ಟರ್ ಒಬ್ಬನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಬಾಗಲಕೋಟೆ ಜಿಲ್ಲೆಯ ನಿವಾಸಿ ಪ್ರದೀಪ್ ಕಾಶಪ್ಪ ನಾಯ್ಕರ್ (35) ಎಂದು ಗುರುತಿಸಲಾಗಿದೆ.
ಘಟನೆ ಏಪ್ರಿಲ್ 22ರಂದು ಸಂಭವಿಸಿದ್ದು, ಮುಡಿಪುವಿನಿಂದ ಸ್ಟೇಟ್ ಬ್ಯಾಂಕ್ ಕಡೆಗೆ ತೆರಳುತ್ತಿದ್ದ ಸರಕಾರಿ ಬಸ್ನಲ್ಲಿ ಲೈಂಗಿಕ ಕಿರುಕುಳ ನಡೆದಿದೆ.
ಪ್ರಯಾಣದ ವೇಳೆ ನಿದ್ದೆಗೆ ಜಾರಿ ಹೋದ ಮಹಿಳಾ ಪ್ರಯಾಣಿಕೆಗೆ ಕಂಡಕ್ಟರ್ ಲೈಂಗಿಕ ತೊಂದರೆ ನೀಡಿರುವುದನ್ನು ಗಮನಿಸಿದ ಸಹ ಪ್ರಯಾಣಿಕನೊಬ್ಬ ಈ ಕೃತ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.
ವೈರಲ್ ಆದ ಈ ವಿಡಿಯೋ ಜನಮನ್ನಣೆಯನ್ನು ಸೆಳೆದು, ಪೊಲೀಸ್ ಇಲಾಖೆ ತ್ವರಿತ ಕ್ರಮಕ್ಕೆ ಮುಂದಾಗಿ ಕೊಣಾಜೆ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಮಹಿಳಾ ಸುರಕ್ಷತೆಗೆ ಗಂಭೀರ ಆದ್ಯತೆ ನೀಡುತ್ತಿರುವ ಪೊಲೀಸರು, ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸಿ, ಯಾವುದೇ ಶಂಕಿತ ವರ್ತನೆ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿ ಕೊಂಡಿದ್ದಾರೆ.