ದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸೇನೆ ಶಕ್ತಿಯುತ ಹೆಜ್ಜೆಯನ್ನಿಟ್ಟಿದೆ.
ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ಮೇ 7ರ ನಸುಕಿನ ಜಾವ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ಶಕ್ತಿಶಾಲಿ ದಾಳಿ ನಡೆಸಿದೆ.
ಮೂಲಗಳ ಪ್ರಕಾರ, ಈ ದಾಳಿಯಲ್ಲಿ ಒಟ್ಟು ಒಂಬತ್ತು ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ಬಹವಾಲ್ಪುರ್, ಮುರಿಡೈ, ಗುಲ್ಬುರ್, ಭಿಂಬರ್, ಚಕ್ ಅಮ್ರು, ಬಾಗ್, ಕೋಟ್ಲಿ, ಸಿಯಾಲ್ನೋಟ್ ಮತ್ತು ಮುಜಫರಾಬಾದ್ ಎಂಬ ಪ್ರದೇಶಗಳು ಗಂಭೀರವಾಗಿ ತತ್ತರಿಸಿವೆ.
ಭಾರತೀಯ ಸೇನೆಯ ದಾಳಿಗೆ ಈ ತಾಣಗಳಲ್ಲಿ ತೀವ್ರ ಹಾನಿಯಾಗಿದೆ ಎಂದು ವರದಿಯಾಗಿದೆ.
ಈ ದಾಳಿಯಿಂದಾಗಿ 80ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಮತ್ತು ಅನೇಕ ಭಯೋತ್ಪಾದಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಲಷ್ಕರ್ ಉಗ್ರರಿಗೆ ತರಬೇತಿ ನೀಡುತ್ತಿದ್ದ ಸುಬಾನಲ್ಲಾಹ್ ಮಸೀದಿ ಸೇರಿದಂತೆ ಹಲವು ಪ್ರಮುಖ ತಾಣಗಳು ಸಂಪೂರ್ಣವಾಗಿ ನಾಶವಾಗಿದೆ ಎಂದು ತಿಳಿದು ಬಂದಿದೆ.
ಈ ಮೂಲಕ ಉಗ್ರರ ನೆಲೆಯನ್ನೇ ಧ್ವಂಸಗೊಳಿಸುವಲ್ಲಿ ಭಾರತ ಯಶಸ್ವಿಯಾಗಿರುವುದು ಸ್ಪಷ್ಟವಾಗಿದೆ.
ಭಾರತದ ಈ ಕಾರ್ಯಾಚರಣೆ ಪಾಕಿಸ್ತಾನದಲ್ಲಿ ಭೀತಿ ಮೂಡಿಸಿದ್ದು ದೇಶದ ವಿವಿಧ ಮಸೀದಿಗಳಿಂದ ಜನರಿಗೆ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಘೋಷಣೆಗಳು ಕೇಳಿಬರುತ್ತಿವೆ.
ಮನೆಗಳಲ್ಲಿ ಯಾರೂ ಇರಬಾರದು ಎಂಬ ಎಚ್ಚರಿಕೆಯಿಂದ ಪಾಕಿಸ್ತಾನದಾದ್ಯಂತ ಭಯದ ಛಾಯೆ ಆವರಿಸಿಯಿದೆ.