ಕಾಸರಗೋಡು: ಕೂಡ್ಲು ಶ್ರೀ ಮೂಕಾಂಬಿಕಾ ದೇವಾಲಯದ ಗರ್ಭಗುಡಿಯ ಶಿಲಾನ್ಯಾಸ; ಪುನರ್ ನಿರ್ಮಾಣಕ್ಕೆ ನಾಂದಿ!

  • 09 May 2025 05:26:50 PM


ಕಾಸರಗೋಡು : ಕಾಸರಗೋಡು ಜಿಲ್ಲೆಯ ಪುರಾತನ ಮತ್ತು ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಕೂಡ್ಲು ಗ್ರಾಮದ ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಶಿಲಾಮಯ ಗರ್ಭಗುಡಿಯ ಪುನರ್‌ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಜರುಗಿತು. 

 

ಈ ಮೂಲಕ ದೇವಾಲಯದ ಜೀರ್ಣೋದ್ಧಾರ, ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಚಟುವಟಿಕೆಗಳಿಗೆ ಧಾರ್ಮಿಕ ನಾಂದಿಯಾಗಿದೆ.

 

ಶುಕ್ರವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮವನ್ನು ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನೆರವೇರಿಸಿದರು. 

 

ಈ ಸಂದರ್ಭದಲ್ಲಿ ದೇವಾಲಯದ ತಂತ್ರಿ ಕೃಷ್ಣ ಗುರೂಜಿ ಕುಕ್ಕಾಜೆ, ಡಳಿತ ಮೊಕತೇಸರ ಅಚ್ಯುತ ಕೆ., ಧರ್ಮದರ್ಶಿ ನಾರಾಯಣ ಪೂಜಾರಿ ಮತ್ತು ಜೀರ್ಣೋದ್ಧಾರ ಸಮಿತಿಯ ಪ್ರಮುಖ ಪದಾಧಿಕಾರಿಗಳಾದ ಡಾ. ಅನಂತ ಕಾಮತ್, ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಮೋಹನ್ ರಾಜ್ ಕಾಳ್ಯಂಗಾಡು, ಹರೀಶ್ ಕೊಳ್ಕೆಬೈಲು ಹಾಗೂ ಶಾಂತಕುಮಾರ್ ಮುಂಡಿತ್ತಡ್ಕ ಮುಂತಾದವರು ಉಪಸ್ಥಿತರಿದ್ದರು.

 

 ಜೀರ್ಣೋದ್ಧಾರ ಕಾರ್ಯಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಅವರು ಗೌರವಾಧ್ಯಕ್ಷರಾಗಿ, ಮೋಹನ್ ರಾಜ್ ಕಾಳ್ಯಂಗಾಡು ಅಧ್ಯಕ್ಷರಾಗಿ, ಹರೀಶ್ ಕೊಳ್ಕೆಬೈಲು ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಶಾಂತಕುಮಾರ್ ಮುಂಡಿತ್ತಡ್ಕ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

 

ಈ ಸಮಿತಿಯ ನೇತೃತ್ವದಲ್ಲಿ ದೇವಾಲಯದ ಗರ್ಭಗುಡಿ, ನಾಗದೇವರ ಕಟ್ಟೆ, ಆಂಜನೇಯ ಮತ್ತು ವೀರಭದ್ರ ದೇವರ ಸ್ಥಾನಪಲ್ಲಟ ಹಾಗೂ ಪುನರ್ ನಿರ್ಮಾಣ, ಕಲ್ಲರ್ಟಿ ಹಾಗೂ ಗುಳಿ ಸನ್ನಿಧಿಗಳ ಪುನರ್ ನಿರ್ಮಾಣ ಮತ್ತು ನೂತನ ದರ್ಶನ ಮಂಟಪದ ನಿರ್ಮಾಣ ಕಾರ್ಯಗಳೂ ನಡೆಯುತ್ತಿವೆ. 

 

ಈ ಎಲ್ಲಾ ಯೋಜನೆಗಳಿಗೆ ಒಟ್ಟು ಒಂದು ಕೋಟಿ ರೂ.ಕ್ಕೂ ಅಧಿಕ ವೆಚ್ಚವಾಗಲಿದೆ ಎಂದು ಸಮಿತಿ ತಿಳಿಸಿದ್ದು, ಭಕ್ತರಿಂದ ತನು-ಮನ-ಧನ ಸಹಕಾರದ ನಿರೀಕ್ಷೆ ವ್ಯಕ್ತಪಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.