ಮಾಣಿಲ: ನಕಲಿ ಐ ಡಿ ಮಾಡಿಕೊಂಡು ಹಿಂದೂ ಎಂಬುದಾಗಿ ನಾಟಕವಾಡಿ ಮದುವೆ ಭರವಸೆ ನೀಡಿ ಮಹಿಳೆಗೆ ದೈಹಿಕ ಶೋಷಣೆವೆಸಗುತ್ತಿದ್ದ ವಾಲ್ಟರ್ ಡಿಸೋಜ ಕೊನೆಗೂ ಕಣ್ಣೂರು ಏರ್ಪೋರ್ಟ್‌ನಲ್ಲಿ ಮಾಗಡಿ ಪೊಲೀಸರಿಂದ ಬಂಧನ! ಹಿಂದೂ ಜಾಗರಣ ವೇದಿಕೆಯ ಹೋರಾಟಕ್ಕೆ ಸಂದ ಜಯ!

  • 12 May 2025 11:49:14 PM


ಮಾಣಿಲ: ಕೊಡಗಿನ ಯುವತಿಯೋರ್ವಳನ್ನು ಹಿಂದೂ ಎಂದು ನಂಬಿಕೆ ಮೂಡಿಸಿ ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ, ನಂತರ ವಂಚನೆ ಹಾಗೂ ಅತ್ಯಾಚಾರವೆಸಗಿದ ಆರೋಪದ ಮೇಲೆ ವಿಟ್ಲ ತಾಲ್ಲೂಕಿನ ಮಾನಿಲ ಗ್ರಾಮದ ವಾಲ್ಟರ್ ಡಿಸೋಜ ಎಂಬಾತನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

 

2016ರಿಂದ ಆರೋಪಿ ನಕಲಿ ಗುರುತು ಪತ್ರಗಳ ಸಹಾಯದಿಂದ ಹೋಟೆಲ್‌ಗಳಲ್ಲಿ ದೈಹಿಕ ಸಂಪರ್ಕ ಹೊಂದಿದ್ದು ನಂತರ ಆರೋಪಿಯ ತಂಗಿಯ ಮುಖಾಂತರ ಅವನು ಹಿಂದೂ ಅಲ್ಲ, ಕ್ರಿಶ್ಚನ್ ಎಂಬ ಸತ್ಯ ಬೆಳಕಿಗೆ ಬಂದಿದ್ದು, ಯುವತಿ ವಂಚಿತೆಯಾಗಿರುವುದನ್ನು ಅರಿತ ಆಕೆ ನೀಡಿದ ದೂರಿನಲ್ಲಿ, ತನ್ನ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಆರೋಪಿ ಬ್ಲಾಕ್‌ಮೇಲ್ ಮಾಡಲು ಯತ್ನಿಸಿದ್ದ ಎಂದೂ ಸ್ನೇಹಿತರನ್ನು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎಂಬುದಾಗಿ ತಿಳಿಸಿದ್ದಾಳೆ.

 

ಕಾನೂನು ತಿಳುವಳಿಕೆ ಇಲ್ಲದ ಕಾರಣ ಯುವತಿ ತಡವಾಗಿ ದೂರು ಸಲ್ಲಿಸಿದ್ದರೂ, ತನ್ನ ಹಿತೈಷಿಗಳ ನೆರವಿನಿಂದ ಎಲ್ಲಾ ಸಾಕ್ಷ್ಯಾಧಾರಗಳನ್ನು ಪಾಂಡೇಶ್ವರ ಠಾಣೆಗೆ ನೀಡಿದ್ದು ಆರೋಪಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾಳೆ.

 

ಈ ಪ್ರಕರಣದಲ್ಲಿ ವಿಟ್ಲ ಭಾಗದ ಹಿಂದೂ ಜಾಗರಣ ವೇದಿಕೆ ಮತ್ತು ಮಂಗಳೂರು ಗ್ರಾಮಾಂತರ ಜಿಲ್ಲೆ ಪ್ರಮುಖರು ಹಸ್ತಕ್ಷೇಪ ಮಾಡಿದ್ದು, ಅವರ ಒತ್ತಾಯದಿಂದ ಮಂಗಳೂರಿನಲ್ಲಿ ಮೊದಲು ಎಫ್‌ಐಆರ್ ದಾಖಲಾಯಿತು. ಆದರೆ ಘಟನೆ ಬೆಂಗಳೂರಿನಲ್ಲಿ ನಡೆದ ಹಿನ್ನೆಲೆ, ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾಯಿಸಲಾಯಿತು. ತನಿಖೆಯ ಭಾಗವಾಗಿ ಮಾಗಡಿ ಪೊಲೀಸರು ಕ್ರಮ ಕೈಕೊಂಡಿದ್ದು ಇದೀಗ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

 

ಈ ಹೋರಾಟಕ್ಕೆ ಶ್ರಮಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಬಂಟ್ವಾಳ ಎಂಎಲ್ಎ ರಾಜೇಶ್ ನಾಯ್ಕ್ ಹಾಗೂ ಬಲವಾದ ಸ್ಫೂರ್ತಿದಾಯಕವಾಗಿ ಸಹಕಾರ ನೀಡಿದ ಹಿಂದೂಜಾಗರಣ ವೇದಿಕೆಯ ಪ್ರಾಂತ ವಕೀಲರಾದ ಕಿಶೋರ್ ಕುಮಾರ್ ರೈ ಹಾಗೂ ಎಲ್ಲ ಸಹಾಯಕರಿಗೆ ಯುವತಿ ಕೃತಜ್ಞತೆ ಸಲ್ಲಿಸಿದ್ದಾಳೆ. 

 

ಆರೋಪಿಯನ್ನು ವಶಕ್ಕೆ ತೆಗೆದುಕೊಂಡ ಮಾಗಡಿ ಪೊಲೀಸರು ನಡೆಸಿದ ಕಾರ್ಯಾಚರಣೆಗೆ ಸಾರ್ವಜನಿಕರೂ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.