ಉಡುಪಿ : ಉಡುಪಿ ಜಿಲ್ಲೆಯ ತೆಕ್ಕಟ್ಟೆಯಲ್ಲಿ ಇಂದು ಬೆಳಿಗ್ಗೆ ಒಂದು ಕುಟುಂಬ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಸಂಭವಿಸಿದೆ.
ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಹಾಗೂ ಮಗ ಸಾವನ್ನಪ್ಪಿದ್ದಾರೆ. ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಗ ಪ್ರಸಾದ್ ದೇವಾಡಿಗ (22) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಸುದ್ದಿಯನ್ನು ತಿಳಿದ ತಂದೆ ಮಾಧವ ದೇವಾಡಿಗ (56) ತಕ್ಷಣ ಬಾವಿಗೆ ಹಾರಿದ್ದು ಈ ದುರ್ಘಟನೆಯಿಂದಾಗಿ ಇಬ್ಬರೂ ಮೃತಪಟ್ಟಿದ್ದಾರೆ.
ಗಂಡ ಮತ್ತು ಮಗ ಬಾವಿಗೆ ಹಾರಿರುವ ದೃಶ್ಯವನ್ನು ಕಂಡ ತಾಯಿ ತಾರ ದೇವಾಡಿಗ ಕೂಡ ಬಾವಿಗೆ ಹಾರಿದ್ದು, ಈಗ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ.
ಈ ವಿಷಯ ತಿಳಿದ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ.
ಮೃತರು ತೆಕ್ಕಟ್ಟೆಯ ಕಂಚುಗರುಬೆಟ್ಟು ನಿವಾಸಿಗಳಾಗಿದ್ದು, ಮಾಧವ ದೇವಾಡಿಗ ಅಂಕದ ಕಟ್ಟೆ ಪೆಟ್ರೋಲ್ ಬಂಕ್ನಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮನೆಯಿಂದ ಡೆತ್ ನೋಟ್ ಸಿಕ್ಕಿದ್ದು, ಸಾಲ ಬಾಧೆ ಮತ್ತು ಸಮಾಜದ ಮುಂದೆ ಮರ್ಯಾದೆಯ ಭೀತಿಗೆ ಇವರ ಈ ಅತ್ಯಂತ ದೌರ್ಭಾಗ್ಯಪೂರ್ಣ ನಿರ್ಧಾರಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.