ಹಾವೇರಿ: ರಾಜ್ಯಾದ್ಯಂತ ಭಾರಿ ಸುದ್ದಿಗೆ ಕಾರಣವಾಗಿದ್ದ ಹಾನಗಲ್ಲ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಇದೀಗ ನಾಟಕೀಯ ತಿರುವು ಸಿಕ್ಕಿದ್ದು, ಪ್ರಕರಣದ ಏಳು ಪ್ರಮುಖ ಆರೋಪಿಗಳಿಗೆ ಹಾವೇರಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (FTSC-1) ನ್ಯಾಯಾಲಯದಿಂದ ಜಾಮೀನು ದೊರೆತಿದೆ.
17 ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿತರಿಗೆ ಈಗ ಬಿಡುಗಡೆ ದಾರಿ ತೆರೆದಿದೆ.
26 ವರ್ಷದ ಸಂತ್ರಸ್ತೆ, ಜನವರಿ 8, 2023ರಂದು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಏಳು ಪುರುಷರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ದೂರನ್ನು ದಾಖಲಿಸಿದ್ದರು.
ಅದಾದ ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ CRPC ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ನೀಡಿದ್ದಳು ಹಾಗೂ ತಹಸೀಲ್ದಾರ್ ಸಮ್ಮುಖದಲ್ಲಿ ನಡೆದ ಗುರುತಿನ ಪರೇಡ್ನಲ್ಲಿ ಪ್ರಮುಖ ಆರೋಪಿಗಳನ್ನು ಗುರುತಿಸಿದ್ದರು.
ಆದರೆ, ಇದೀಗ ಇತ್ತೀಚೆಗೆ ಸಂತ್ರಸ್ತೆ ತನ್ನ ಹಿಂದಿನ ಹೇಳಿಕೆಗಳಿಂದ ಹಿಂದೆ ಸರಿದು “ಅತ್ಯಾಚಾರ ನಡೆದೇ ಇಲ್ಲ” ಎಂಬ ತದ್ವಿರುದ್ಧ ಹೇಳಿಕೆಯನ್ನು ನೀಡಿರುತ್ತಾಳೆ. ಈ ಹೇಳಿಕೆಯ ಮೇರೆಗೆ ನ್ಯಾಯಾಲಯವು ಪ್ರಮುಖ ಆರೋಪಿಗಳು ಅಲ್ತಾಪ್ ಚಂದನಕಟ್ಟಿ ಮದರಸಾಬ ಮಂಡಕ್ಕಿ, ಸಮಿವುಲ್ಲಾ ಲಾಲನವರ, ಮೊಹಮ್ಮದ್ ಸಾದಿಕ್ ಅಗಸಿಮನಿ, ಸೋಹಿಬ್ ಮುಲ್ಲಾ, ತೌಸಿಫ್ ಚೋಟಿ ಹಾಗೂ ರಿಯಾಜ್ ಸವಿಕರ್ ಅವರಿಗೆ ಜಾಮೀನು ನೀಡಿದೆ.
ಮೇಲ್ಮಟ್ಟದ ತನಿಖೆಯಡಿಯಲ್ಲಿ, ಹೆಚ್ಚುವರಿ ಎಸ್ಪಿ ಸಿ. ಗೋಪಾಲ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದ್ದ ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ನಲ್ಲಿ 80ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ, ಡಿಎನ್ಎ ಮಾದರಿ, ಕೂದಲು, ರಕ್ತದ ಮಾದರಿಗಳು, ಸಿಸಿಟಿವಿ ದೃಶ್ಯಾವಳಿ, ಹಾಗೂ ಅಪರಾಧ ಸ್ಥಳದಿಂದ ವಶಪಡಿಸಿಕೊಂಡ ಎಲ್ಲಾ ಪುರಾವೆಗಳ ವಿವರಗಳೂ ಸೇರಿಸಲಾಗಿತ್ತು.
ಪ್ರಾರಂಭದಲ್ಲಿ ಈ ಪ್ರಕರಣ 'ನೈತಿಕ ಪೊಲೀಸ್ಗಿರಿ' ಕೇಸ್ ಆಗಿ ದಾಖಲಾಗಿದ್ದರೆ, ನಂತರದ ಹಂತದಲ್ಲಿ ಸಂತ್ರಸ್ತೆಯ ಹೇಳಿಕೆ ಆಧರಿಸಿ ಸಾಮೂಹಿಕ ಅತ್ಯಾಚಾರ ಆರೋಪ ದಾಖಲಾಗಿತ್ತು. ಆದರೆ ಇದೀಗ ಈ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ.
ಜಾಮೀನು ಸಿಕ್ಕ ಬೆನ್ನಲ್ಲೇ ಆರೋಪಿಗಳು ರಸ್ತೆಗಳಲ್ಲಿ ಬಹಿರಂಗವಾಗಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ನಿಟ್ಟಿನಲ್ಲಿ 5 ಕಾರು ಗಳಲ್ಲಿ 20 ಹಿಂಬಾಲಕರನ್ನು ಕಟ್ಟಿಕೊಂಡು ಅಕ್ಕಿಆಲೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದಂತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ನ್ಯಾಯದ ಪ್ರಕ್ರಿಯೆ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಉದ್ಭವವಾಗಿವೆ.