ಮಂಗಳೂರು: ಜನೌಷಧಿ ಕೇಂದ್ರ ಮುಚ್ಚಿಸುತ್ತಿರುವ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ನಿರ್ಧಾರದ ಮೇಲೆ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರ ಆಕ್ರೋಶ

  • 22 May 2025 08:58:05 PM


ಮಂಗಳೂರು: ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ಆದೇಶ ಹೊರಡಿಸಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದಾರೆ.

 

 ಬಡಜನರ ಆರೋಗ್ಯಕ್ಕಾಗಿ ರೂಪುಗೊಂಡಿರುವ, ಶೇಕಡಾ 70 ರಿಂದ 90 ರಷ್ಟು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿ ನೀಡುತ್ತಿರುವ ಈ ಕೇಂದ್ರಗಳನ್ನು ಮುಚ್ಚುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಬದುಕಿಗೆ ಮರಣ ಶಾಸನ ಬರೆದ ಹಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

 

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನದಲ್ಲಿ ಆರಂಭವಾದ ಜನೌಷಧಿ ಯೋಜನೆಯು ದೇಶದಾದ್ಯಂತ ಯಶಸ್ವಿ ಮಾದರಿಯಾಗಿ ಬೆಳೆಯುತ್ತಿದೆ.

 

 ಕರ್ನಾಟಕದಲ್ಲಿಯೂ ನೂರಾರು ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರಗಳ ಮೂಲಕ ಲಕ್ಷಾಂತರ ಜನರಿಗೆ ಸಾತ್ವಿಕ ಔಷಧಿಗಳು ಕೂಡ ಲಭ್ಯವಾಗುತ್ತಿದೆ. ಮಾತ್ರವಲ್ಲದೇ, ಈ ಕೇಂದ್ರಗಳು ಹಲವಾರು ಜನರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನೂ ಕಲ್ಪಿಸಿವೆ. 

 

 

ಇಂತಹ ಸಂವೇದನಾಶೀಲ ಯೋಜನೆಯನ್ನು, ಕೇವಲ ರಾಜಕೀಯದ ವಕ್ರದೃಷ್ಟಿಯಿಂದ ನಿಲ್ಲಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಅತ್ಯಂತ ಖಂಡನೀಯವಾದುದು ಎಂದು ಸಂಸದ ಚೌಟ ಅವರು ಹೇಳಿದರು.

 

ರಾಜ್ಯ ಸರ್ಕಾರ ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು. ಬಡವರ ಪಾಲಿನ ವರದಾನವಾಗಿರುವ ಜನೌಷಧಿ ಯೋಜನೆಯ ವಿರುದ್ಧ ಕೈಗೊಂಡಿರುವ ಈ ಜನವಿರೋಧಿ ಕ್ರಮ, ಖಾಸಗಿ ಔಷಧ ಕಂಪನಿಗಳ ಲಾಬಿಗೆ ಮಣಿದ ತೀರ್ಮಾನವೋ ಅಥವಾ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಜನಮನ್ನಣೆಗೆ ಜಿಗಿದು ಮಾಡುತ್ತಿರುವ ರಾಜಕೀಯವೋ ಎಂಬ ಅನುಮಾನಕ್ಕೆ ದಾರಿ ಮಾಡಿದೆ. ಬಡವರ ಆರೋಗ್ಯದಲ್ಲಿಯೂ ರಾಜಕೀಯ ಮಾಡುವ ಈ ಭ್ರಷ್ಟ ಸರ್ಕಾರವನ್ನು ಜನತೆಯೇ ಬುದ್ದಿ ಕಲಿಸುವರು. ಜನೌಷಧಿ ಕೇಂದ್ರಗಳ ಮುಚ್ಚುವಿಕೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಮತ್ತು ಸರ್ಕಾರ ತಕ್ಷಣವೇ ಈ ಆದೇಶ ಹಿಂಪಡೆಯಬೇಕೆಂದು ತೀವ್ರ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.