ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಛಲವಾದಿ ಟಿ. ನಾರಾಯಣಸ್ವಾಮಿ ಅವರಿಗೆ ಚಿತ್ತಾಪುರದ ಅತಿಥಿ ಗೃಹದಲ್ಲಿ ದಿಗ್ಬಂಧನ ವಿಧಿಸಿದ್ದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
“ಶೋಷಿತ ಸಮುದಾಯದ ಹಿರಿಯ ಮುಖಂಡನಿಗೆ ಈ ರೀತಿಯ ಅವಮಾನ ಮಾಡಿದ್ದು ರಾಜ್ಯದ ಗೃಹ ಇಲಾಖೆಯ ಸಂಪೂರ್ಣ ವೈಫಲ್ಯ ಮತ್ತು ಭದ್ರತಾ ವ್ಯವಸ್ಥೆಯ ಕುಸಿತವನ್ನು ಸ್ಪಷ್ಟಪಡಿಸುತ್ತದೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾರಾಯಣಸ್ವಾಮಿಯವರು ಕಾಂಗ್ರೆಸ್ ಬೆಂಬಲಿತ ಗೂಂಡಾಗಳ ದಿಬ್ಬಂದನಕ್ಕೆ ಒಳಗಾಗಿರುವುದನ್ನು ಪಾಳೆಗಾರಿಕೆ ರಾಜಕಾರಣದ ಸ್ಪಷ್ಟ ಸೂಚಕವೆಂದು ಅವರು ಹೇಳಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಾಂತಿ ಮತ್ತು ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಜನರು ಭಯಭೀತರಾಗಿರುವ ವಾತಾವರಣ ನಿರ್ಮಾಣವಾಗಿದೆ ಎಂದೂ ಪೋಲೀಸರು ಸರಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಕಾನೂನು ಕಾಪಾಡುವ ಅಧಿಕಾರಿಗಳು ಗೂಂಡಾಗಳಿಗೆ ರಕ್ಷಣೆ ನೀಡುವ ಸ್ಥಿತಿಗೆ ದಾರಿ ಮಾಡಿಕೊಡುತ್ತಿದ್ದಾರೆ,” ಎಂದು ಗಂಭೀರ ಆರೋಪವನ್ನು ಹೊರಿಸಿದರು. “
ವಿಪಕ್ಷದ ನಾಯಕನಿಗೆ ರಾಜ್ಯ ಸರಕಾರ ಭದ್ರತೆ ನೀಡಲಾಗದ ಸ್ಥಿತಿಗೆ ಬಿದ್ದರೆ, ಸಾಮಾನ್ಯ ನಾಗರಿಕರ ಪರಿಸ್ಥಿತಿ ಹೇಗಿರಬಹುದು ಎಂಬುದು ಆತಂಕದ ವಿಷಯ,” ಎಂಬುದಾಗಿ ಹೇಳಿದರು.
“ಶೋಷಿತ ಸಮುದಾಯಗಳ ಪರವಶತೆಯ ಬಗ್ಗೆ ಮಾತುಗಳಾಡುವ ಕಾಂಗ್ರೆಸ್ ಸರ್ಕಾರ, ನಿಜವಾಗಿ ಶೋಷಿತ ಸಮುದಾಯದ ನಾಯಕರೊಬ್ಬರಿಗೂ ರಕ್ಷಣೆ ನೀಡಲು ವಿಫಲವಾದರೆ, ಅವರಿಗೆ ಯಾವುದೇ ನೈತಿಕತೆ ಉಳಿದಿಲ್ಲ,” ಎಂದು ಶಾಸಕ ರಾಜೇಶ್ ನಾಯ್ಕ್ ಟೀಕಿಸಿದರು.
ನಾರಾಯಣಸ್ವಾಮಿಗೆ ತಕ್ಷಣ ಸೂಕ್ತ ಭದ್ರತೆ ಒದಗಿಸಲು ಮತ್ತು ಗೂಂಡಾ ಗಿರಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಗ್ರಹಿಸುತ್ತೇನೆ ಎಂದು ಹೇಳಿದರು.