ತೊಕ್ಕೊಟ್ಟು : ಜಂಕ್ಷನ್ ಸಮೀಪ ಗುರುವಾರ ಮಧ್ಯಾಹ್ನ ನಡೆದ ಒಂದು ಘಟನೆ ಬೇಕರಿಯಲ್ಲಿ ಆತಂಕದ ವಾತಾವರಣವನ್ನ ಉಂಟುಮಾಡಿದೆ.
ಮಾರುತಿ ಸ್ವೀಟ್ಸ್ ಮಾಲಕರಾದ ಅಶ್ವಿನ್ ಕುಮಾರ್ ಅವರು ತಮ್ಮ ಬೇಕರಿ ಮುಂಭಾಗದಲ್ಲಿ ನಿಲ್ಲಿಸಿದ್ದ ಟೆಂಪೋ ರಿಕ್ಷಾವನ್ನು ಬದಿಗೆ ಸರಿಸಲು ಕೇಳಿದ ಹಿನ್ನೆಲೆಯಲ್ಲಿ, ಚಾಲಕ ಬಶೀರ್ ಹಾಗೂ ಅವನ ಸಹಚರ ಇಶಾನ್ ಅವರು ಕ್ರೂರತೆ ಮೆರೆದಿದ್ದಾರೆ.
ಮಾತಿನ ಚಕಮಕಿ ಹತ್ತಿರದ ದಾಂದಲೆಗೂ ಕಾರಣವಾಗಿದ್ದು, ಇಬ್ಬರು ರಿಕ್ಷಾ ಚಾಲಕರು ಬೇಕರಿಗೆ ನುಗ್ಗಿ ಮಾಲಕ ಹಾಗೂ ಅವರ ತಾಯಿಗೆ ಹಲ್ಲೆಗೆ ಮುಂದಾಗಿರುವ ದೃಶ್ಯವು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಘಟನೆಯಾಗುವ ಸಂದರ್ಭದಲ್ಲಿ, ಬೇಕರಿಯೊಳಗಿದ್ದ ಅಶ್ವಿನ್ ಅವರ ತಾಯಿ ಮತ್ತು ಸಿಬ್ಬಂದಿಯ ಯುವತಿ ಇಬ್ಬರು ರಿಕ್ಷಾ ಚಾಲಕರನ್ನು ತಡೆಯಲು ಯತ್ನಿಸಿದಾಗ, ಅವರ ಮೇಲೆಯೂ ಹಲ್ಲೆಗೈಯುವ ಪ್ರಯತ್ನ ನಡೆಸಿದ್ದಾರೆ
ಈ ವೇಳೆ ಪಕ್ಕದಲ್ಲಿದ್ದ ಶಿವಸಾಗರ್ ಹೊಟೇಲಿನ ಮಾಲಕ ಸುಚಿವೃತ ಶೆಟ್ಟಿ ತಕ್ಷಣ ಮಧ್ಯ ಪ್ರವೇಶ ಮಾಡಿ, ಅಶ್ವಿನ್ ಅವರನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಶೀರ್ ಮತ್ತು ಇಶಾನ್ ಜೊತೆ ಇತರ ಕೆಲ ರಿಕ್ಷಾ ಚಾಲಕರೂ ಘಟನೆಯಲ್ಲಿ ಪಾಲ್ಗೊಂಡಿದ್ದು, ಈ ಗಲಾಟೆ ಬಟ್ಟೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬೆನ್ನಲ್ಲೇ ಉಂಟಾಗಿರುವುದರಿಂದ, ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ.
ಘಟನೆಯ ಕುರಿತು ಬೇಕರಿ ಮಾಲಕ ಅಶ್ವಿನ್ ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಶೀರ್ ಮತ್ತು ಇಶಾನ್ ವಿರುದ್ಧ ಜೀವ ಬೆದರಿಕೆ, ದಾಂದಲೆ ಹಾಗೂ ಹಲ್ಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ಸದ್ಯಕ್ಕೆ ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.