ಮಂಗಳೂರು: ವಳಚ್ಚಿಲ್ ನಲ್ಲಿ ಚೂರಿಯಿಂದ ಇರಿದ ಸಂಬಂಧಿ ; ಮದುವೆ ಬಿಕ್ಕಟ್ಟಿಗೆ ಸುಲೈಮಾನ್ ಬಲಿ, ಮಕ್ಕಳು ಆಸ್ಪತ್ರೆಯಲ್ಲಿ! ಆರೋಪಿ ಬಂಧನ!

  • 23 May 2025 03:03:53 PM


ಮಂಗಳೂರು: ಮಂಗಳೂರು ನಗರದ ಹೊರವಲಯದ ವಳಚ್ಚಿಲ್ ಪ್ರದೇಶದಲ್ಲಿ ಮೇ 22ರ ರಾತ್ರಿ ನಡೆದ ಭೀಕರ ಘಟನೆ ಜನರಲ್ಲಿ ಆತಂಕ ಮೂಡಿಸಿದೆ. ಮದುವೆ ದಲ್ಲಾಳಿ ಕೆಲಸ ಮಾಡಿಕೊಂಡಿದ್ದ ವಾಮಂಜೂರು ನಿವಾಸಿ ಸುಲೈಮಾನ್ (50) ಎಂಬವರು ಚೂರಿ ಇರಿತಕ್ಕೆ ಬಲಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. 

 

ಅವರ ಇಬ್ಬರು ಪುತ್ರರಾದ ಸಿಯಾಬ್ ಮತ್ತು ರಿಯಾಬ್ ಕೂಡ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ವರದಿಯಾಗಿದೆ.

 

 ಈ ಭೀಕರ ಕೃತ್ಯಕ್ಕೆ ಆರೋಪಿಯಾಗಿರುವವರು ಅವರ ಸಂಬಂಧಿಯೇ ಆಗಿರುವ ಮುಸ್ತಫಾ (30) ಎನ್ನಲಾಗಿದೆ.

 

ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು ಎಂಟು ತಿಂಗಳ ಹಿಂದೆ ಸುಲೈಮಾನ್ ಅವರು ಮುಸ್ತಫಾ ಮತ್ತು ಶಾಹೀನಾಜ್ ಎಂಬ ಮಹಿಳೆಯ ಮದುವೆಯನ್ನು ನಡಿಸಿದ್ದರಿಂದ, ಮದುವೆಯ ನಂತರ ಉಂಟಾದ ವೈವಾಹಿಕ ಸಮಸ್ಯೆಗಳಿಂದ ಶಾಹೀನಾಜ್ ತನ್ನ ತವರು ಮನೆಗೆ ಹಿಂದಿರುಗಿದ್ದಳು. 

 

ಇದರಿಂದಾಗಿ ಮುಸ್ತಫಾ ಮತ್ತು ಸುಲೈಮಾನ್ ನಡುವೆ ವೈಮನಸ್ಸು ಉಂಟಾಗಿದ್ದು ಘಟನೆಯ ದಿನ ಮುಸ್ತಫಾ, ಸುಲೈಮಾನ್‌ಗೆ ನಿಂದನೆಯ ಕರೆ ಮಾಡಿ, ಗಲಾಟೆಗೆ ಕಾರಣವಾಗಿತ್ತು. 

 

ಬಳಿಕ ಸುಲೈಮಾನ್ ತಮ್ಮ ಪುತ್ರರೊಂದಿಗೆ ಮುಸ್ತಫಾ ಮನೆಗೆ ವಿಷಯ ಬಗೆಹರಿಸಲು ಹೋಗಿದ್ದರು. ಮಾತುಕತೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಅಲ್ಲಿಂದ ಹೊರಡುವಾಗ, ಮುಸ್ತಫಾ ಮನೆಯಿಂದ ಹೊರ ಬೀಳುತ್ತಾ ಬ್ಯಾರಿ ಭಾಷೆಯಲ್ಲಿ ಬೆದರಿಕೆ ಹಾಕಿ ಚೂರಿಯಿಂದ ಸುಲೈಮಾನ್ ಅವರ ಕುತ್ತಿಗೆಗೆ ಇರಿದಿದ್ದಾನೆ ಎಂಬ ಮಾಹಿತಿ ದೊರಕಿದೆ.

 

ಸ್ಥಳದಲ್ಲೇ ಕುಸಿದ ಸುಲೈಮಾನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ಮೃತಪಟ್ಟಿದ್ದಾರೆ. ಅದಾದ ಬಳಿಕ ಮುಸ್ತಫಾ ಅವರ ಪುತ್ರರತ್ತ ದಾಳಿ ನಡೆಸಿ ಸಿಯಾಬ್ ಅವರ ಎದೆಗೆ, ರಿಯಾಬ್ ಅವರ ಕೈಗೆ ಇರಿತ ಮಾಡಿದ್ದಾನೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

 

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸುತ್ತಿದ್ದಾರೆ.