ಇಸ್ಲಾಮಾಬಾದ್ : ಪಾಕಿಸ್ತಾನದ ಸೇನಾ ವಕ್ತಾರನಾದ ಅಹ್ಮದ್ ಷರೀಫ್ ಭಯೋತ್ಪಾದಕ ಭಾವನೆಗಳಿಂದ ತುಂಬಿದ ಧಮ್ಕಿಯನ್ನು ನೀಡಿದ್ದು, ಇಡೀ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಇದೀಗ ಚರ್ಚೆಗೆ ಗ್ರಾಸವಾಗಿದೆ.
*ನೀವು ನಮ್ಮ ನೀರನ್ನು ನಿಲ್ಲಿಸಿದರೆ, ನಾವು ನಿಮ್ಮ ಉಸಿರೇ ನಿಲ್ಲಿಸುತ್ತೇವೆ* ಎಂಬ ಆತನ ಹೇಳಿಕೆ, ಭಾರತದ ವಿರುದ್ಧ ಕಿಡಿಕಾರಿದ ಉಗ್ರ ಹಫೀಜ್ ಸಯೀದ್ ನೀಡಿದ ಹಿಂದಿನ ಬೆದರಿಕೆಯನ್ನು ನೆನಪಿಸುತ್ತಿದೆ.
ಪಾಕಿಸ್ತಾನದ ವಿಶ್ವ ವಿದ್ಯಾಲಯವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದು ಇದೀಗ ಈ ವಿಡಿಯೋ ಎಕ್ಸ್ನಲ್ಲಿ ವೈರಲ್ ಆಗಿದೆ.
ಸಿಂಧೂ ನದಿ ನೀರಿನ ಹಂಚಿಕೆ ಸಂಬಂಧಿ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ ಹಿನ್ನೆಲೆಯ ಮೇಲೆ, ಅಹ್ಮದ್ ಷರೀಫ್ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಕ್ರೂರ ದಾಳಿಗೆ ಪ್ರತಿಯಾಗಿ ಭಾರತ ಈ ನಿರ್ಧಾರ ಕೈಗೊಂಡಿತ್ತು.
ಇದನ್ನು ಉಲ್ಲೇಖಿಸಿದ ಪಾಕ್ ಸೇನೆಯ ವಕ್ತಾರ, ಭಾರತದ ವಿರುದ್ಧ ಕಠಿಣ ನಡವಳಿಕೆ ಜಾರಿ ಮಾಡುವ ಹೆದರಿಕೆ ನೀಡಿರುವುದು, ಪಾಕಿಸ್ತಾನದ ಸೇನೆ ಹಾಗೂ ಉಗ್ರ ಸಂಘಟನೆಗಳ ನಡುವಿನ ನಂಟುಗಳನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಈಗಾಗಲೇ 2008ರ ಮುಂಬೈ ದಾಳಿಯ ಪ್ರಮುಖ ಮಾಸ್ಟರ್ಮೈಂಡ್ ಮತ್ತು ಲಷ್ಕರ್-ಎ-ತೈಬಾ ಸಂಸ್ಥಾಪಕ ಹಫೀಜ್ ಸಯೀದ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದನು. ಈಗ ಅದೇ ಭಾಷೆಯೇ ಪುನರಾವರ್ತನೆ ಯಾಗಿರುವುದು ಪಾಕಿಸ್ತಾನ ರಾಜ್ಯ ಮತ್ತು ಭಯೋತ್ಪಾದನೆಯ ಅಸ್ಥಿರವಾದ ಸಂಬಂಧವನ್ನು ಮತ್ತಷ್ಟು ದೃಢಪಡಿಸಿದೆ.
ಅಹ್ಮದ್ ಷರೀಫ್ನ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ, ಪಾಕಿಸ್ತಾನದ ಆಡಳಿತ ಯಂತ್ರ ಈ ಧೋರಣೆಗೆ ಸ್ಪಷ್ಟನೆ ನೀಡಬೇಕಿದೆ ಎನ್ನುವ ಒತ್ತಾಯ ಕೂಡ ಕೇಳಿಬರುತ್ತಿದೆ.