ಮಂಗಳೂರು: ಬಜ್ಪೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಶಾಖೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಈ ದುರ್ಘಟನೆಯನ್ನು ತೀವ್ರವಾಗಿ ಖಂಡಿಸಿತು.
ಮಹಾಸಭೆಯು ಉನ್ನತ ಮಟ್ಟದ ತನಿಖೆ (NIA) ಯನ್ನು ನಡೆಸಿ ಹತ್ಯೆ ಹಿಂದೆ ಇರುವ ಎಲ್ಲಾ ಶಕ್ತಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿತು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭೆಯ ನಾಯಕರು, ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಫಾಜಿಲ್ ಹತ್ಯೆಗೀಡಾದ ವ್ಯಕ್ತಿಯ ತಮ್ಮನಾದ ಆದಿಲ್ naಪಾತ್ರವಿದೆ ಎಂಬ ವರದಿಗಳನ್ನು ಉಲ್ಲೇಖಿಸಿ, ಫಾಜಿಲ್ ಕುಟುಂಬಕ್ಕೆ ನೀಡಿದಂತೆ ಸುಹಾಸ್ ಕುಟುಂಬಕ್ಕೂ ತಕ್ಷಣ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದಲ್ಲಿನ ಹಿಂದೂ ಕಾರ್ಯಕರ್ತರ ಮೇಲಿನ ಹತ್ಯೆ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸುವ ಮೂಲಕ ಹಿಂದಿರುವ ರಾಜಕೀಯ ಷಡ್ಯಂತ್ರಗಳನ್ನು ಬಯಲುಮಾಡಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದುತ್ವ ಪರವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು ಪ್ರಕರಣಗಳಿಗೆ ಗುರಿಯಾಗುತ್ತಿರುವ ಸಂದರ್ಭದಲ್ಲೇ, ಹಿಂದೂ ಮುಖಂಡರ ಮೇಲೆ ಕೊಲೆ ಬೆದರಿಕೆ ನೀಡಿದವರು ಪುಟದಲ್ಲಿ ಪೋಸ್ಟ್ ಹಾಕಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಇದ್ದುದನ್ನು ಮಹಾಸಭೆ ಪ್ರಶ್ನೆ ಮಾಡಿತು.
ಹಿಂದೂ ಕಾರ್ಯಕರ್ತರ ಸಾವನ್ನು ರಾಜಕೀಯವಾಗಿ ಉಪಯೋಗಿಸುವ ಯಾವ ಪಕ್ಷವಾದರೂ ಅದನ್ನು ಹಿಂದೂ ಮಹಾಸಭಾ ವಿರೋಧಿಸುತ್ತದೆ ಎಂಬುದನ್ನು ಸ್ಪಷ್ಟೀಕರಿಸಿತು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಡಾ. ಎಲ್.ಕೆ. ಸುವರ್ಣ, ಸಂಸ್ಥಾಪಕ ರಾಜೇಶ್ ಪವಿತ್ರನ್, ಖಜಾಂಚಿ ಲೋಕೇಶ್ ಉಳ್ಳಾಲ, ಕಾರ್ಯದರ್ಶಿ ಗುರುರಾಜ್ ಮತ್ತು ಮಂಗಳೂರು ಗ್ರಾಮಾಂತರ ಪ್ರಮುಖ ಕಿರಣ್ ಉಪಸ್ಥಿತರಿದ್ದರು.