ದೇಲಂಪಾಡಿ: ಅಂಗಡಿಮೊಗರು ಸಮೀಪದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುಪೂಜಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಯಿತು.
ಸೇವಾ ಸಮಿತಿ ಅಧ್ಯಕ್ಷ ಡಿ. ದಾಮೋದರನ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸುಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ಕಾಗಿ ಧನ ಸಹಾಯ ನೀಡಿದ ಕೊಡುಗೈ ದಾನಿ ಮಂಗಳೂರಿನ ಎಸ್.ಎಲ್. ಶೇಟ್ ಜ್ಯುವೆಲ್ಲರಿಯ ಮಾಲಕರಾದ ರವೀಂದ್ರ ಶೇಟ್ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ, ನ್ಯಾಯವಾದಿ ಸತೀಶ್ ಕೊಟೆಕಣಿ, ಮಾಜಿ ಪಂ ಉಪಾಧ್ಯಕ್ಷ ಜಯಂತ ಪಾಟಾಳಿ, ಚಿದಾನಂದ ಆಳ್ವ, ದೇವದಾಸ ರೈ ಮೇನಾಲ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಕಾರ್ಯಕ್ಕೆ ದಾನ ನೀಡಿದ ಎಲ್ಲಾ ದಾನಿಗಳಿಗೆ ಕೃತಜ್ಞತಾ ಪತ್ರ ವಿತರಿಸಲಾಯಿತು.
ಭಕ್ತಿ ಸಂಕೀರ್ತನೆ ಕಾರ್ಯಕ್ರಮವನ್ನು ಆಶೋಕ್ ಅರಿಯಪ್ಪಾಡಿ ಅವರ ನೇತೃತ್ವದಲ್ಲಿ ನಿರ್ವಹಿಸಲಾಯಿತು. ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಡಿ. ರಾಜೇಂದ್ರ ರೈ ಅವರು ನಡೆಸಿದರು.