ಉಜಿರೆ: ಶಸ್ತ್ರ ಚಿಕಿತ್ಸೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ – ಎಸ್.ಡಿ.ಎಂ ಆಸ್ಪತ್ರೆಯಲ್ಲಿ ವಿಶ್ವದ ಮೊದಲ ಸಂಪೂರ್ಣ ಬೆನ್ನು ಮೂಳೆಯ ಗೆಡ್ಡೆ ತೆಗೆಯುವಿಕೆ ಮತ್ತು ಯಶಸ್ವಿ ಡ್ಯೂರಲ್ ದುರಸ್ತಿ ಶಸ್ತ್ರ ಚಿಕಿತ್ಸೆ

  • 27 Jan 2025 08:15:50 PM

ಉಜಿರೆ :(ಜ.27) ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೀಗ ಮತ್ತೊಂದು ಸಾಧನೆ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಅಧ್ಯಾಯ ತೆರೆದಿದೆ. ಎಸ್ ಡಿ ಎಂ ಆಸ್ಪತ್ರೆಯಲ್ಲಿ ವಿಶ್ವದ ಮೊದಲ ಸಂಪೂರ್ಣ ಬೆನ್ನು ಮೂಳೆಯ ಗೆಡ್ಡೆ ತೆಗೆಯುವಿಕೆ ಮತ್ತು ಯಶಸ್ವಿ ಡ್ಯೂರಲ್ ದುರಸ್ತಿಯ ಶಸ್ತ್ರ ಚಿಕಿತ್ಸೆಯು ಅತ್ಯಂತ ಯಶಸ್ವಿಯಾಗಿ ನಡೆದಿದೆ.

 

ಈ ಹಿನ್ನೆಲೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಈ ಸಾಧನೆ ಮಾಡಿದ ಡಾ. ಮಹೇಶ್ ಕೆ. ಮತ್ತು ಡಾ. ಶತಾನಂದ ಪ್ರಸಾದ್ ರಾವ್ ಹಾಗೂ ಅವರ ತಂಡವನ್ನು ಗೌರವ ಪೂರ್ವಕ ಸನ್ಮಾನಿಸಿದರು. ತದನಂತರ ಮಾತನಾಡಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಧಾರವಾಡದ ಮೆಡಿಕಲ್ ಕಲ್ಪನೆ ಇಟ್ಟುಕೊಂಡು ಉಜಿರೆಯಲ್ಲಿ ಕೂಡ ಆಸ್ಪತ್ರೆ ಆರಂಭಿಸಿದೆವು. ಉಜಿರೆಯಲ್ಲಿರುವ ನಮ್ಮ ಸಣ್ಣ ಆಸ್ಪತ್ರೆಯಲ್ಲಿನ ವೈದ್ಯರು ಈಗ ದೊಡ್ಡ ಸಾಧನೆ ಮಾಡಿರುವುದು ನನಗೆ ತುಂಬಾ ಸಂತಸ ತಂದಿದೆ ಎಂದು ಹೇಳಿದರು.

 

ಇಂತಹ ಶಸ್ತ್ರಚಿಕಿತ್ಸೆಯನ್ನು ಹಳ್ಳಿಗಳಲ್ಲಿ ಮಾಡಲು ಭಯ ಪಡುತ್ತಾರೆ.ಆದ್ದರಿಂದ ಮಂಗಳೂರಿಗೆ ಹೋಗುತ್ತಾರೆ. ಆದರೆ ಹಳ್ಳಿಯಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆಗಳು ಆಗುವುದರ ಮೂಲಕ ಜನರಲ್ಲಿ ಇರುವ ಭಯ ದೂರವಾಗಿ ಗ್ರಾಮೀಣ ಪ್ರದೇಶದಲ್ಲಿರುವ ಆಸ್ಪತ್ರೆಗಳ ಮೇಲೆ ನಂಬಿಕೆ ಉಳಿಯುತ್ತದೆ ಎಂದು ಹೇಳಿದರು. ಇದೇ ವೇಳೆ ಈ ಸಾಧನೆ ಮಾಡಿದ ಡಾ. ಮಹೇಶ ಮತ್ತು ಡಾ. ಶತಾನಂದರನ್ನು ಅಭಿನಂದಿಸಿದರು.

 

 ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು, ಧರ್ಮಸ್ಥಳದಲ್ಲಿ ಪವಾಡಗಳು ನಡೆಯುವುದು ನಾವು ಕೇಳಿದ್ದೇವೆ, ನೋಡಿದ್ದೇವೆ. ಉಜಿರೆಯ ಆಸ್ಪತ್ರೆಯಲ್ಲೂ ಇಂತಹ ಪವಾಡ ಮತ್ತು ಮ್ಯಾಜಿಕ್ ನಡೆದಿರುವುದು ನಿಜಕ್ಕೂ ಸಂತಸದ ವಿಷಯ ಎಂದು ಹೇಳಿ ವೈದ್ಯರು ಮತ್ತು ತಂಡವನ್ನು ಅಭಿನಂದಿಸಿದರು.

 

 ಈ ಸಂಧರ್ಭ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ , ಮೆಡಿಕಲ್ ಸೂಪರಿಡೆಂಟ್ ದೇವೆಂದ್ರ ಕುಮಾರ್, ವೇದಿಕೆಯ ಮುಂಭಾಗ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಧರ್ಣಮ್ಮ ಉಪಸ್ಥಿತರಿದ್ದರು.

 

ಶಸ್ತ್ರಚಿಕಿತ್ಸೆ ಬಗ್ಗೆ ವೈದ್ಯ ಶತಾನಂದ ಅವರ ಮಾತು…!

 

 

65 ವರ್ಷದ ಧರ್ಣಮ್ಮ ಎಂಬ ವೃದ್ಧೆಯು ಸಹಿಸಲು ಅಸಾಧ್ಯವಾದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಉಜಿರೆಯ ಎಸ್ ಡಿ ಎಂ ಆಸ್ಪತ್ರೆ ಗೆ ಬಂದಾಗ ಬೆನ್ನುಮೂಳೆಯ ಪರಿಶೀಲನೆ ನಡೆಸಿದಾಗ ಎಂ.ಆರ್.ಐ ಮೂಲಕ ಗೆಡ್ಡೆ ಇರೋದು ಪತ್ತೆಯಾಯಿತು. ಡಾ.ಮಹೇಶ್ ನೇತೃತ್ವದ ತಂಡ ಆರು ಗಂಟೆಯ ಸತತ ಶಸ್ತ್ರ ಚಿಕಿತ್ಸೆಯಲ್ಲಿ ಮೊದಲ ಬಾರಿಗೆ ಎಂಡೋಸ್ಕೋಪಿಕ್ ಚಿಕಿತ್ಸೆ ಮಾಡಲಾಗಿದ್ದು, ಕೇವಲ ಒಂದು ಸೆಂಟಿಮೀಟರ್ ಛೇದನದೊಂದಿಗೆ ಮೂರು ಸೆಂಟಿಮೀಟರ್ ಗೆಡ್ಡೆಯನ್ನು ಹೊರತೆಗೆಯಲಾಗಿದೆ. ಎಂಡೋಸ್ಕೋಪಿಕ್ ಚಿಕಿತ್ಸೆಯು ಕನಿಷ್ಠ ರಕ್ತದ ನಷ್ಟದೊಂದಿಗೆ ಯಾವುದೇ ಅಂಗಾಂಶಗಳಿಗೆ ಹಾನಿಯಾಗದಂತೆ ಮಾಡಲಾಗಿದೆ ಎಂದೂ ಸಾಮಾನ್ಯವಾಗಿ ಹಳೆಯ ವಿಧಾನದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿದರೆ ಹೆಚ್ಚಿನ ಗಾಯ ಮತ್ತು ವಿವಿಧ ನರಗಳಿಗೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ.

 

 

ಆದ್ದರಿಂದ ಎಸ್ ಡಿ ಎಂ ಆಸ್ಪತ್ರೆ ಯಲ್ಲಿ ನಡೆದ ಎಂಡೋಸ್ಕೋಪಿಕ್ ನಡೆದ ಶಸ್ತ್ರ ಚಿಕಿತ್ಸೆ ಯಲ್ಲಿ ಒಂದೇ ದಿನದಲ್ಲಿ ವೃದ್ಧೆ ಮತ್ತೆ ನಡೆಯುವಂತಾಗಿದೆ .ಶಸ್ತ್ರ ಚಿಕಿತ್ಸೆ ನಡೆದ ಬಳಿಕ ಡ್ಯೂರಲ್ ಹಾನಿಯನ್ನು ಸರಿಪಡಿಸಲು ಹೊಲಿಗೆ ವಿಶ್ವದ ಯಾವ ಆಸ್ಪತ್ರೆ ಯಲ್ಲೂ ಯಶಸ್ವಿಯಾಗಿಲ್ಲ. ಆದರೆ ಎಸ್ ಡಿ ಎಂ ಆಸ್ಪತ್ರೆ ಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಹೊಲಿಗೆ ಯನ್ನು ಹಾಕಲಾಗಿದೆ ಎಂದು Dr ಶತಾನಂದ ಅವರು ಹೇಳಿದರು.