ಮಂಜೇಶ್ವರ: ವರ್ಕಾಡಿ ಜಂಕ್ಷನ್ ಬಳಿಯ ನಲ್ಲೆಂಗಿಪದವಿಯಲ್ಲಿ ಇಂದು ಬೆಳಗಿನ ಜಾವ ಅಪ್ಪಳಿಸಿದ ಗುಂಡಿನ ದಾಳಿಯಿಂದ ಕುಟುಂಬವು ಅಪಾಯದಿಂದ ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮುಂಜಾನೆ ಸುಮಾರು 2.30 ಯ ಹಾಗೆ ಬಿ.ಎಂ. ಹರೀಶ್ ಅವರ ನಿವಾಸದ ಕಿಟಿಕಿಗೆ ಗುಂಡು ಹೊಡೆದ ಪರಿಣಾಮ ಗಾಜುಗಳು ಒಡೆದು ಹೋಗಿವೆ.
ಈ ಸಮಯದಲ್ಲಿ ಮನೆಯೊಳಗೆಿದ್ದ ಹರೀಶ್ ಹಾಗೂ ಅವರ ಕುಟುಂಬಸ್ಥರು ಭಯದಿಂದ ಹೊರಬಂದು ನೋಡಿದಾಗ, ದುಷ್ಕರ್ಮಿಗಳು ಕಾರು ಮತ್ತು ಬೈಕ್ನಲ್ಲಿ ಸ್ಥಳದಿಂದ ಪರಾರಿಯಾಗಿರುವುದಾಗಿ ಕಂಡಿದ್ದಾರೆ ಎಂದೂ ಅದನ್ನು ಅವರು ಮಂಜೇಶ್ವರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದು, ಫಾರೆನ್ಸಿಕ್ ತಜ್ಞರನ್ನು ಕರೆಸಿ ದಾಖಲೆ ಸಂಗ್ರಹಿಸಲಾಗಿದೆ.
ಸ್ಥಳೀಯರ ಪ್ರಕಾರ, ಈ ಭಾಗದಲ್ಲಿ ಹಂದಿಗಳ ಕಾಟ ಹೆಚ್ಚಾಗಿರುವುದರಿಂದ ಬೇಟೆಗಾರರು ಹಾರಿಸಿದ ಗುಂಡು ತಪ್ಪಾಗಿ ಮನೆಗೆ ಬಿದ್ದಿರಬಹುದು ಎಂಬ ಶಂಕೆಯನ್ನೂ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ತನಿಖೆ ಮುಂದುವರಿದಿದ್ದು, ಕುಟುಂಬಸ್ಥರು ಪ್ರಸ್ತುತ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.